ಭಾಷಣದ ವೇಳೆ ಜಾವಡೇಕರ್ ಬದಲು ಜಾವೀದ್ ಎಂದ ಡಿಕೆ ಶಿವಕುಮಾರ್

ತುಮಕೂರು: ತುರುವೇಕೆರೆಯಲ್ಲಿ ನಡೆದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರದಮಲ್ಲಿ ಇಂಧನ ಡಿಕೆ ಶಿವಕುಮಾರ್ ಕೇಂದ್ರ ಮಾನವ ಸಂಪನ್ಮೂಲ ಸಚಿವ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಪ್ರಕಾಶ್ ಜಾವಡೇಕರ್ ಹೆಸರನ್ನು ತಪ್ಪಾಗಿ ಉಚ್ಚಾರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

ವೇದಿಕೆಯ ಮೇಲೆ ಭಾಷಣ ಮಾಡುವಾಗ ಸಚಿವರ ಹೆಸರನ್ನು ಪ್ರಸ್ತಾಪಿಸುವ ವೇಳೆ ಜಾವಿದ್, ಜಾವಿಡ್ ಅವಡೆಕರ್ ಎಂದು ಇಂಧನ ಸಚಿವರು ಉಚ್ಚರಿಸಿದ್ದರು. ಬಳಿಕ ಪಕ್ಕದಲ್ಲಿದ್ದವರಿಂದ ಹೆಸರನ್ನು ಕೇಳಿಕೊಂಡು ಜಾವಡೇಕರ್ ಎಂದು ಹೇಳಿ ತಪ್ಪನ್ನು ಸರಿಪಡಿಸಿಕೊಂಡರು.

ನಂತರ ಭಾಷಣ ಮುಂದುವರಿಸಿದ ಅವರು, ಸಿದ್ದರಾಮಯ್ಯನವರು 50 ಸಾವಿರ ರೂ. ಸಾಲ ಮನ್ನಾ ಮಾಡಿದಾಗ ಜಾವಡೇಕರ್ ಅವರು ರೈತರಿಗೆ ಲಾಲಿಪಪ್ ಕೊಟ್ಟಿದ್ದಾರೆ ಎಂದು ಹೇಳಿದರು. ಆದರೆ ಅವರು ಕೇಂದ್ರದ ಮೂಲಕ 50 ಸಾವಿರ ರೂ. ಸಾಲ ಮನ್ನಾ ಮಾಡಿಸಲಿ. ಈ ಮೂಲಕ ರೈತರಿಗೆ ಚಾಕಲೇಟ್ ನೀಡಲಿ ಎಂದು ಸವಾಲು ಹಾಕಿದರು.

ನಂತರ ಎಂದಿನಂತೆ ಸೀರೆ, ಸೈಕಲ್ ಮತ್ತು ಜೈಲು ಇದು ಬಿಜೆಪಿ ಮಾಡಿದ ಸಾಧನೆ ಎಂದು ವಾಗ್ದಾಳಿ ನಡೆಸಿದರು. ಸ್ವತಃ ದೇವೇಗೌಡರೇ ಸಿದ್ದರಾಮಯ್ಯರ ಆಡಳಿತವನ್ನು ಒಪ್ಪಿಕೊಂಡಿದ್ದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹಾಗಾಗಿ ಜೆಡಿಎಸ್ ಕೂಡಾ ಅಧಿಕಾರಕ್ಕೆ ಬರಲು ನೈತಿಕತೆ ಇಲ್ಲ. ಜನರ ಬಳಿ ಜೆಡಿಎಸ್ ಮತವನ್ನೂ ಕೇಳಬಾರದು ಎಂದು ಡಿಕೆಶಿ ಹೇಳಿದರು.

Comments

Leave a Reply

Your email address will not be published. Required fields are marked *