ಡಿಕೆ ಶಿವಕುಮಾರ್ ಪ್ರಾಮಾಣಿಕ ಶಿಸ್ತಿನ ಸಿಪಾಯಿ: ಪರಮೇಶ್ವರ್

ತುಮಕೂರು: ಡಿಕೆ ಶಿವಕುಮಾರ್ ಒಬ್ಬ ಪಕ್ಷದ ಪ್ರಾಮಾಣಿಕ ಶಿಸ್ತಿನ ಸಿಪಾಯಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನ ಅವರು ನಿಭಾಯಿಸುತ್ತಾರೆ ಎಂದು ಹೊಗಳಿದರು.

5 ವರ್ಷ ನಾವು ಸುಭದ್ರವಾಗಿ ಸರ್ಕಾರ ನಡೆಸ್ತೀವಿ ಅನ್ನೋ ವಿಶ್ವಾಸ ಇದೆ, ಬುಧವಾರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಯಾರಿಗೆ ಯಾವ ಖಾತೆ ಎನ್ನುವುದು ಜೂನ್ 6 ರಂದು ಗೊತ್ತಾಗಲಿದೆ. ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಚೌಕಟ್ಟಿನೊಳಗೆ ಸಮ್ಮಿಶ್ರ ಸರ್ಕಾರವನ್ನು ವಿಶ್ವಾಸಮತದಿಂದ ರಚನೆ ಮಾಡಿದ್ದೇವೆ. ಈ ಕುರಿತು ರಾಜ್ಯಪಾಲರಿಗೆ ಅನುಮತಿ ಕೋರಿದ್ದೆವು. ರಾಜ್ಯಪಾಲರು ಕಾನೂನನ್ನ ಸ್ವಲ್ಪ ಬದಲಿಸಿ ಬಿಜೆಪಿಗೆ ಅವಕಾಶ ನೀಡಿದ್ದರು. ನಾವು ಇದರ ವಿರುದ್ದ ಸುಪ್ರಿಂಕೋರ್ಟ್ ಗೆ ಮೊರೆಹೋಗಿದ್ದೆವು. ವಿಶ್ವಾಸಮತದಿಂದ ಸರ್ಕಾರ ಆಯ್ಕೆ ಮಾಡಿ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತು ಎಂದು ತಿಳಿಸಿದರು.

ಅಧಿಕಾರಿಗಳೊಟ್ಟಿಗೆ ನಾವು ಯಾವುದೇ ಲೋಪ ಇಲ್ಲದೇ ಆಡಳಿತ ನಡೆಸುತ್ತೇವೆ. ಸರಿಯಾದ ಸಮಯಕ್ಕೆ ಮುಂಗಾರು ಬಂದಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ವಿತರಣೆಗೆ ನಾವು ಸೂಚನೆ ನೀಡಿದ್ದೇವೆ. ರೈತರಿಗೆ ಎಷ್ಟು ಅಗತ್ಯ ಇದೆ ಅದೆಲ್ಲಾ ಪೂರೈಕೆಯಾಗುತ್ತಿದೆ. ಯಾವುದೇ ಲೋಪವಿಲ್ಲದೇ ರೈತರ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ಪ್ರತಿಯೊಂದು ಜಿಲ್ಲೆಗೆ ಸಚಿವರನ್ನ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ತುಮಕೂರು ಜಿಲ್ಲೆಗೆ ಡಿಸಿಎಂ ಆಗಿ ಪ್ರಥಮ ಬಾರಿಗೆ ಗೌರವ ಸಿಕ್ಕಿದೆ. ಈ ಅವಕಾಶವನ್ನು ವಿನಿಯೋಗ ಮಾಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಯೋಜನೆಗಳು ಕಾರ್ಯಕ್ರಮಗಳನ್ನ ಜಿಲ್ಲೆಗೆ ತರುತ್ತೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಒಟ್ಟಿಗೆ ಹೋಗುತ್ತೇವೆ. ಆದರೆ ಸೀಟುಗಳ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಐದು ವರ್ಷ ಹೆಚ್‍ಡಿಕೆ ಸಿಎಂ ಆಗಿ ಮುಂದುವರಿಯುತ್ತಾರ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದು ನಮ್ಮ ಪಕ್ಷದ ಸಮಸ್ಯೆ, ಮಾಧ್ಯಮದವರ ಸಮಸ್ಯೆ ಅಲ್ಲ. ಈಗಾಗಲೇ ಅದರ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *