ರಾಜೇಗೌಡ್ರೆ, ಅಸೆಂಬ್ಲಿಗೆ ಬರದಿದ್ರು ಚಿಂತೆ ಇಲ್ಲ, ಸದಸ್ಯತ್ವ ಮಾಡಿಸಿ: ಶಾಸಕರಿಗೆ ಡಿಕೆಶಿ ಕ್ಲಾಸ್

ಚಿಕ್ಕಮಗಳೂರು: ರಾಜೇಗೌಡರೇ ಐ ಯಮ್ ಸಾರಿ ನೀವು ಅಸೆಂಬ್ಲಿಗೆ ಬರದಿದ್ದರೂ ಚಿಂತೆ ಇಲ್ಲ. ನೀವು ಅಸೆಂಬ್ಲಿಗೆ ಬರಲು ಹೋಗಬೇಡಿ. ನಿಮಗೆ ಏನ್ ಪರ್ಮಿಷನ್ ಬೇಕೋ ನಾನು ಕೊಡಿಸುತ್ತೇನೆ. 27ನೇ ತಾರೀಖಿನೊಳಗೆ 35 ಸಾವಿರ ಸದಸ್ಯತ್ವವನ್ನ ಮಾಡಿಸಬೇಕು ಎಂದು ಖಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಇಂದು ರಂಭಾಪುರಿ ಪೀಠದಲ್ಲಿ ನಡೆಯುತ್ತಿದ್ದ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಳಿಕ ಜಿಲ್ಲೆಯ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ನಿರೀಕ್ಷೆಯಂತೆ ಸದಸ್ಯತ್ವ ಮಾಡಿಸದ ಜಿಲ್ಲಾ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡರು. ತರೀಕೆರೆ ತಾಲೂಕಿನಲ್ಲಿ ಮಾತ್ರ 35 ಸಾವಿರ ಸದಸ್ಯತ್ವ ಮಾಡಿಸಿದ್ದಾರೆ. ಉಳಿದ ಎಲ್ಲೂ ಆಗಿಲ್ಲ ಎಂದು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡು ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

ಇದೇ ವೇಳೆ, ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಡಿ.ಕೆ.ಶಿವಕುಮಾರ್ ಸಾರ್ವಜನಿಕರ ಮಧ್ಯೆ ಅವಮಾನವಾಗುವ ರೀತಿ ವರ್ತಿಸಿದ ಘಟನೆಯೂ ನಡೆಯಿತು. ಮೋಟಮ್ಮ ಮಗಳು ನಯನಾ ಮೋಟಮ್ಮ ಮಾತನಾಡುವಾಗ ನಮಗೆ ಜವಾಬ್ದಾರಿ ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ನಿಮ್ಮ ತಾಯಿಯನ್ನು ಶಾಸಕಿ, ಮಿನಿಸ್ಟರ್, ಎಂಎಲ್‍ಸಿ ಮಾಡಿದ್ದೇವೆ. ಇನ್ನೇನು ಮಾಡಬೇಕು. ಇಷ್ಟಾದರೂ ನಾನು ಹಂಗೂ ಇಲ್ಲ, ಹಿಂಗೂ ಇಲ್ಲ ಅಂದರೆ ಯಾರು ಕೇಳುತ್ತಾರೆ ಎಂದರು. ಬಳಿಕ ಕಾರ್ಯಕ್ರಮ ಮುಗಿದ ಮೇಲೆ ಮೋಟಮ್ಮ ಬಂದು ಡಿ.ಕೆ.ಶಿವಕುಮಾರ್‍ರನ್ನು ಮಾತನಾಡಿಸಲು ಯತ್ನಿಸಿದರು ಪ್ರತಿಕ್ರಿಯೆ ನೀಡದೆ ಹೋದರು. ಆಗ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಮುಜುಗರ ಉಂಟಾಯಿತು. ಇದೇ ವೇಳೆ, ಜಿಲ್ಲೆಯಲ್ಲಿನ ಡಿಜಿಟಲ್ ಸದಸ್ಯತ್ವದ ಬಗ್ಗೆ ಜಿಲ್ಲಾ ಮುಖಂಡರಿಗೆ ಡಿಕೆಶಿ ಪಾಠ ಮಾಡಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಿ ಪರಿಹಾರ ನೀಡಿ ಅದು ಬಿಟ್ಟು ಪ್ರಚೋದನೆ ಮಾಡಬೇಡಿ: ಖರ್ಗೆ

ತರೀಕೆರೆ ತಾಲೂಕು ಹೊರತುಪಡಿಸಿದರೆ ಉಳಿದ ಕಡೆ ನಿರೀಕ್ಷೆಯಷ್ಟು ಸದಸ್ಯತ್ವ ಮಾಡಿಸಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದಾರೆ. ನಾನು ಯಾವ ಕಾರಣವನ್ನೂ ಕೇಳುವುದಿಲ್ಲ. ಪ್ರತಿದಿನದ ಬೆಳವಣಿಗೆಯನ್ನು ರಾಹುಲ್ ಗಾಂಧಿ ನೋಡುತ್ತಿದ್ದಾರೆ, ಸದಸ್ಯತ್ವ ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದರು. ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದ ಅವಕಾಶ ಸಿಗಲಿದೆ. ಸದಸ್ಯರನ್ನೆ ಮಾಡಿಸದಿದ್ದರೆ ಮತ ಹೇಗೆ ತೆಗೆದುಕೊಳ್ತೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಇಂದು ಎಲ್ಲಾ ಲಾಸ್ ಆಯ್ತು ಎಂದರು. ಬಿಜೆಪಿ ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್‍ಗೆ ಸಿದ್ಧತೆ ನಡೆಸುತ್ತಿದ್ದಾರೆ. ನಾವು ಅದನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಅವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ. ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಮುಂದೆ ನಮ್ಮ ಸರ್ಕಾರ ಬರುತ್ತೆ ಆಗ ನಾವು ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದರು.

Comments

Leave a Reply

Your email address will not be published. Required fields are marked *