ಅಜ್ಜಯ್ಯನ ಮೊರೆ ಹೋದ ಡಿಕೆ ಸಹೋದರರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಗೊಂದಲ ಮುಂದುವರಿದ ಬೆನ್ನಲ್ಲೆ ಡಿಕೆ ಸಹೋದರರು ದೇವರ ಮೊರೆ ಹೋಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಕುಣಿಗಲ್ ಸಮೀಪ ದೇವಸ್ಥಾನವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿದ್ದಾರೆ. ಸಹೋದರ ಸಂಸದ ಡಿ.ಕೆ.ಸುರೇಶ್ ಜೊತೆಗೆ ಬೆಂಗಳೂರಿನ ರಹಸ್ಯ ಸ್ಥಳವೊಂದರಲ್ಲಿ ತಮ್ಮ ನಂಬಿಕೆಯ ದೈವ ಮಾನವ ನೊಣವಿನಕೆರೆ ಅಜ್ಜಯ್ಯರನ್ನ ಭೇಟಿ ಮಾಡಿದ್ದಾರೆ.

ಅಜ್ಜಯ್ಯನ ಗದ್ದುಗೆ ಮುಂದೆ ಸಹೋದರನ ಜೊತೆ ಸೇರಿ ಮೂರು ಗಂಟೆಗಳ ಕಾಲ ಅಜ್ಜಯ್ಯನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಪಟ್ಟಾಭಿಷೇಕದ ಜೊತೆಗೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಜ್ಜಯ್ಯನ ಸಮ್ಮುಖದಲ್ಲಿ ಸಹೋದರರು ಗದ್ದುಗೆ ಪೂಜೆಯನ್ನು ನೆರವೇರಿಸಿದ್ದಾರೆ. ಒಟ್ಟು ಮೂರು ಗಂಟೆಗಳ ಕಾಲ ನಡೆದ ಮಾತುಕತೆ ಹಾಗೂ ಪೂಜೆ ಸಂದರ್ಭದಲ್ಲಿ ನೊಣವಿನ ಕೆರೆ ಅಜ್ಜಯ್ಯ ಡಿಕೆ ಸಹೋದರರಿಗೆ ಮುಂದಿದೆ ವಿಜಯದ ಹಾದಿ ಎಂದು ಶುಭ ಹಾರೈಸಿದ್ದಾರೆ. ವಿಜಯದ ಭವಿಷ್ಯವಾಣಿಯೊಂದಿಗೆ ಡಿಕೆಶಿ ಸಹೋದರರು ಅಜ್ಜಯ್ಯನ ಗದ್ದುಗೆ ಪೂಜೆ ಮಾಡಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *