ಮೈತ್ರಿ ಸರ್ಕಾರದಲ್ಲಿ ನ್ಯಾಯ ಕೊಡಿಸೋಕೆ ನಿಮ್ಮ ಕೈಯಿಂದ ಆಗಲಿಲ್ಲ – ಸಿದ್ದು ವಿರುದ್ಧ ಸುಧಾಕರ್ ಕಿಡಿ

ಚಿಕ್ಕಬಳ್ಳಾಪುರ: ನಾವು ಸ್ವಾಭಿಮಾನಿಗಳು, ಸ್ವಾರ್ಥಿಗಳಲ್ಲ, ಹಂಗಂತ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅನರ್ಹ ಶಾಸಕ ಸುಧಾಕರ್ ತಿರುಗೇಟು ನೀಡಿದ್ದಾರೆ.

ತಾಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನಮಗೆ ನ್ಯಾಯ ಕೊಡಿಸೋಕೆ ನಿಮ್ಮ ಕೈಯಿಂದ ಆಗಲಿಲ್ಲ. ಸಿದ್ದರಾಮಯ್ಯ ನಾಯಕತ್ವದಲ್ಲಿ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರೇ ಘೋಷಣೆ ಮಾಡಿದ ಮೆಡಿಕಲ್ ಕಾಲೇಜಿಗೆ ಅನುದಾನ ಕೊಡಲಿಲ್ಲ. ಅನುದಾನ ಯಾಕೆ ಕೊಡಲಿಲ್ಲ? ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲೇಜು ಉಪಯುಕ್ತ ಇಲ್ಲದ್ದಿದ್ದರೆ ಕನಕಪುರಕ್ಕೆ ಉಪಯುಕ್ತವಿದೆಯೇ ಎಂದು ಪ್ರಶ್ನಿಸಿದರು.

ವಿವಿಧ ಕಾರಣಗಳಿಂದಾಗಿ ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು, ಜನರ ಹಿತ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿಯೇ ರಾಜೀನಾಮೆ ನೀಡಿದ್ದೇವೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರೇ ನೀವು ರಾಜಕೀಯ ಪ್ರಾರಂಭ ಮಾಡಿದ ಪಕ್ಷ ಯಾವುದು? ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದು ಯಾಕೆ? ಬಹುಶಃ ಸೋನಿಯಾಗಾಂಧಿ ಹಾಗೂ ಇಂದಿರಾ ಗಾಂಧಿಯವರನ್ನು ಬಹಳ ಟೀಕೆ ಮಾಡಿದವರ ಪೈಕಿ ರಾಜ್ಯದಲ್ಲಿ ನೀವೇ ಮೊದಲಿಗರು. ಆದರೆ ಈಗ ನೀವು ಕಾಂಗ್ರೆಸ್ ಪಕ್ಷ ಸೇರಿಲ್ಲವೇ? ರಾಜಕೀಯ ಬದುಕಲ್ಲಿ ಕೆಲವು ತಿರುವುಗಳಿರುತ್ತವೆ. ಅದು ನಿಮ್ಮ ಜೀವನದಲ್ಲೂ ಆಗಿದೆ. ರಾಜಕಾರಣಕ್ಕೋಸ್ಕರ ನಮ್ಮನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

Comments

Leave a Reply

Your email address will not be published. Required fields are marked *