ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

– ಹಿರಿಯ ಮಗಳು ಅಕೌಂಟಿಗೆ 2 ಲಕ್ಷ ಹಾಕ್ತಿದ್ದಾಳೆ

ಮಂಡ್ಯ: ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಅಸಲಿ ಕಾರಣವನ್ನು ಅನರ್ಹ ಶಾಸಕ ನಾರಾಯಣಗೌಡ ಬಿಚ್ಚಿಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನ್ನನ್ನು ಯಡಿಯೂರಪ್ಪ ಮನೆಗೆ ಕರೆದೊಯ್ದಿದ್ದರು. ಆಗ ಬಿಎಸ್‌ವೈ ಅವರು ಏನಪ್ಪ ಸಿಎಂ ಆಗೋ ಚಾನ್ಸ್ ಇದೆ ಬೆಂಬಲಿಸ್ತೀಯಾ ಅಂತ ಕೇಳಿದರು. ಅಲ್ಲದೆ ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆಆರ್‌ಪೇಟೆ ಅಭಿವೃದ್ಧಿಯಾಗಿಲ್ಲ. ಈಗಲೂ ಕನಸಲ್ಲಿ ಬಂದು ಕಾಡ್ತಿದ್ದಾರೆ. ನೀನು ಕೈ ಜೋಡಿಸಿದರೆ ಕೆಆರ್‌ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯಾ ಎಂದು ಯಡಿಯೂರಪ್ಪ ನನ್ನನ್ನು ಕೇಳಿದ್ದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ಧಿಗೆ 700 ಕೋಟಿ ಕೇಳಿದ್ದೆ. ಆದರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು ಎಂದು ಸ್ಫೋಟಕ ಸತ್ಯವನ್ನು ಬಯಲು ಮಾಡಿದರು.

ರೇವಣ್ಣಗೆ ಟಾಂಗ್:
ಇದೇ ವೇಳೆ, ರೇವಣ್ಣ ಸಾಹೇಬರು ಹೇಳ್ತಾರೆ ಎಂಜಲು ಲೋಟ ತೊಳೆಯೋನು ಅಂತ. ನನಗೆ ಅದೇ ಆಶೀರ್ವಾದ ಮಾಡಿರೋದು. ಎಂಜಲು ತೊಳಿಯೋದಕ್ಕಿಂತ ಪುಣ್ಯ ಕೆಲಸ ಇನ್ನೊಂದಿಲ್ಲ. ಎಂಜಲು ಎತ್ತೋಕೆ ಸುಲಭವಾಗಿ ಸಿಗಲ್ಲ. ನನಗೆ ಇದೇ ಶಕ್ತಿ ಕೊಡಲಿ. ಸದಾ ನಾನು ಸೇವಕನಾಗಿ, ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ ಎಂಜಲು ಎತ್ತುತ್ತೇನೆ ಎಂದು ಹೇಳುವ ಮೂಲಕ ರೇವಣ್ಣಗೆ ಟಾಂಗ್ ನೀಡಿದರು.

ದಳಪತಿಗಳಿಗೆ ಸವಾಲು:
ಕೆಆರ್‌ಪೇಟೆಗೆ ರಾಜಕೀಯ ಮಾಡಲು ನೀವು ಬರುತ್ತಿದ್ದೀರಾ. ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ನಿಮ್ಮ ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ನಾರಾಯಣಗೌಡರು ದಳಪತಿಗಳಿಗೆ ಸವಾಲು ಹಾಕಿದರು.

ಸುಮ್ಮನೆ ನಾರಾಯಣಗೌಡ ಗೆದ್ದರು, ಸೋತರೂ ಮುಂಬೈಗೆ ಹೋಗುತ್ತಾನೆ ಅಂತಾರೆ. ನಾನು ಹೋದರೂ ನನ್ನ ಹೊಟ್ಟೆ ಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ 2 ಲಕ್ಷ ಹಾಕುತ್ತಿದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದರು.

Comments

Leave a Reply

Your email address will not be published. Required fields are marked *