ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್- ಡರ್ಟಿ ದಾರ ದಂಧೆಗೆ ಬಿತ್ತು ಬ್ರೇಕ್

ಬೆಂಗಳೂರು: ಆಪರೇಷನ್ ನಂತರ ಹೊಲಿಗೆ ಮಾಡಲು ಬಳಸುವ ದಾರವನ್ನು ಕೊಳಕಾಗಿ ತಯಾರಿಸುತ್ತಿದ್ದ ಕೈಗಾರಿಕೆಯ ಅಸಲಿಯತ್ತನ್ನು ಪಬ್ಲಿಕ್ ಟಿವಿ ಬಯಲು ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗಾರಿಕೆ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಸಾಮಾನ್ಯವಾಗಿ ಆಪರೇಷನ್ ನಂತರ ಹೊಲಿಗೆ ಹಾಕಲು ಕುರಿ ಮತ್ತು ಮೇಕೆ ಕೂದಲನ್ನು ಬಳಸಿ ತಯಾರಿಸಲಾದ ದಾರವನ್ನು ಬಳಸಲಾಗುತ್ತದೆ. ಸಿಲಿಕಾನ್ ಸಿಟಿಯ ಅಂಧ್ರಳ್ಳಿಯಲ್ಲಿನ ಕೈಗಾರಿಕೆಯಲ್ಲಿ ಯಾವುದೇ ಅನುಮತಿ ಪಡೆಯದೇ ಬೇಕಾಬಿಟ್ಟಿಯಾಗಿ ಕೊಳಕು ಕೊಳಕಾಗಿ ದಾರ ತಯಾರಿಸಲಾಗುತ್ತಿತ್ತು. ಈ ದಂಧೆಯನ್ನು ನಿಮ್ಮ ಪಬ್ಲಿಕ್ ಟಿವಿ ಬಯಲು ಮಾಡಿತ್ತು. ಇದನ್ನೂ ಓದಿ: ಹುಷಾರಪ್ಪೋ ಹುಷಾರು – ಇದು ‘ಆಪರೇಷನ್ ಡರ್ಟಿ ಸ್ಟಿಚ್’ ಕಥೆ

ಸುದ್ದಿ ಪ್ರಸಾರವಾದ ತಕ್ಷಣ ಎಚ್ಚೆತ್ತ ಮಾಲಿನ್ಯ ನಿಯಂತ್ರಣ ಮಂಡಳಿ ದಂಧೆಗೆ ಬ್ರೇಕ್ ಹಾಕಿದೆ. ಇದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಬಿಗ್ ಇಂಪ್ಯಾಕ್ಟ್, ರಹಸ್ಯ ಕಾರ್ಯಾಚರಣೆಯಲ್ಲಿ ಅಲ್ಲಿನ ದಂಧೆಯನ್ನು ಇಂಚಿಂಚಾಗಿ ಬಯಲು ಮಾಡಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ, ಯಾವುದೇ ಅನುಮತಿ ಪಡೆಯದೇ ದಂಧೆ ನಡೆಸುತ್ತಿದ್ದ ಕೈಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕೆಇಬಿ ಹಾಗೂ ಜಲಮಂಡಳಿಗೆ ಪತ್ರ ಬರೆದಿದೆ.

ಅನಧೀಕೃತ ಕಾರ್ಖಾನೆಗೆ ಬೀಗ ಜಡಿಯುವಂತೆ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದೀಗ ಮೌಖಿಕ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಕೆಲಸ ನಡೆಯಬಾರದು. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಅನುಸರಿಸದೆ ದಂಧೆ ನಡೆಸಿದ್ದಕ್ಕೆ ವಿದ್ಯತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *