ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದ್ವೆ ಸಂಭ್ರಮ

ಬೆಂಗಳೂರು: ಲಾಕ್‍ಡೌನ್ ನಡುವೆಯೂ ಅನೇಕ ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮದುವೆ ಸಂಭ್ರಮ ನಡೆದಿದೆ.

ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಪಿ.ಅರ್ಜುನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜುನ್ ಮದುವೆಗೆ ಸ್ಯಾಂಡಲ್‍ವುಡ್ ಕಲಾವಿದರು ಬರಲು ಸಾಧ್ಯವಾಗಿಲ್ಲ. ಆದರೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರ್ಜುನ್ ಅವರು ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಗೀತರಚನೆಕಾರರಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದು, ಸಹಾಯಕ ನಿರ್ದೇಶಕನಾಗಿಯೂ ಕೂಡ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಕಳೆದ ವರ್ಷ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ನಟ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಕ್ಕೂ ಇವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *