ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿ, ಎಚ್‍ಡಿಕೆಗೆ ಸಲಹೆ ಕೊಟ್ಟ ದಿಂಗಾಲೇಶ್ವರ ಶ್ರೀ

ಗದಗ: ರೈತರು ತೊಂದರೆಯಲ್ಲಿದ್ದಾರೆ ರೈತರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ರೈತರ ಸಾಲ ಮನ್ನಾ ಮಾಡುವ ಮೂಲಕ ರೈತ ಪರ ಮುಖ್ಯಮಂತ್ರಿ ಆಗುವಂತೆ ದಿಂಗಾಲೇಶ್ವರ ಶ್ರೀಗಳು ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ಆಗಬಾರದೆಂಬ ಕೂಗಿಗೆ ಎಚ್.ಡಿ.ಕುಮಾರಸ್ವಾಮಿ ಬೆಲೆ ಕೊಡಬಾರದು. ಭವಿಷ್ಯದಲ್ಲಿ ಪ್ರತ್ಯೇಕತೆಯ ಬಗ್ಗೆ ಕೇಂದ್ರ ಸರ್ಕಾರ ಕೈ ಹಾಕಿದ್ರು ನಮ್ಮ ವಿರೋಧವಿದೆ. ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ. ನಮ್ಮ ಸಮಾಜದ ಅಖಂಡತೆಗಾಗಿ ನಮ್ಮ ಹೋರಾಟವಾಗಿದೆ ಅಂದ್ರು.

ಕಾಂಗ್ರೆಸ್ ಗೆ ಎಚ್ಚರಿಕೆ: ವೀರಶೈವ ಲಿಂಗಾಯತ ಸಮಾಜಕ್ಕೆ ಡಿಸಿಎಂ ನೀಡದಿದ್ರೆ ಇನ್ನೂ ಹೆಚ್ಚಿನ ಕಹಿ ಅನುಭವಿಸ್ತೀರಿ ಅಂತ ಕಾಂಗ್ರೆಸ್ ಪಕ್ಷಕ್ಕೆ ದಿಂಗಾಲೇಶ್ವರ ಶ್ರೀಗಳ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ, ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡಿ. ಇಲ್ಲದಿದ್ರೆ ಬರುವ ದಿನಗಳಲ್ಲಿ ಇನ್ನೂ ಕಹಿ ಅನುಭವಿಸ್ತೀರಿ ಅಂತ ಭವಿಷ್ಯ ನುಡಿದಿದ್ದಾರೆ.

ಈಗಾಗಲೇ ವೀರಶೈವ ಲಿಂಗಾಯತ ಸಮಾಜ ಒಡೆದು, ಸಮಾಜ ಅಲಕ್ಷ್ಯ ಮಾಡಿದ್ದಕ್ಕೆ ಸಾಕಷ್ಟು ಕಹಿ ಉಂಡಿದ್ದೀರಿ. ಒಂದು ವೇಳೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳದಿದ್ರೆ ಬರುವ ದಿನದ ಇನ್ನೂ ಕಹಿ ಅನುಭವಿಸ್ತೀರಿ. ಈಗ ಶಾಮನೂರು ಅವರಿಗೆ ಡಿಸಿಎಂ ಮಾಡಿದ್ರೆ, ಮುನಿಸಿಕೊಂಡ ಸಮಾಜ ಶಾಂತ ಮಾಡಿದ ಭಾವನೆ ಬರುತ್ತೆ. ಶಾಮನೂರು ಅವರ ಹಿರಿತನ, ಅನುಭವ ಪರಿಗಣಿಸಿ ಡಿಸಿಎಂ ಸ್ಥಾನ ನೀಡಿ ಅಂತ ಕಾಂಗ್ರೆಸ್ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ರಾಷ್ಟ್ರೀಯ ವೀರಶೈವ ಮಠಾಧೀಶರ ಪರ ಶ್ರೀಗಳು ಒತ್ತಾಯ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *