ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

– ಹೆಚ್‍ಡಿಕೆ ಆರೋಪಕ್ಕೆ ತಿರುಗೇಟು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಳಿನ್ ಕುಮಾರ್ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಎಂತಹ ಅವಿವೇಕಿಗೆ ಬಿಜೆಪಿ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಅನ್ನೋದನ್ನ ಇದು ತೋರಿಸುತ್ತೆ. ಕಟೀಲ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ರಾಜ್ಯಾಧ್ಯಕ್ಷರಾದವರ ಮನಸ್ಸು ಎಷ್ಟು ಕೊಳಕಾಗಿದೆ ಅನ್ನೋದು ಗೊತ್ರಾಗುತ್ತೆ ಎಂದು ಕಿಡಿಕಾರಿದರು.

ನಳಿನ್ ಕುಮಾರ್ ಕಟೀಲ್, ಯತ್ನಾಳ್, ಸಿ.ಟಿ.ರವಿ, ಅನಂತ್ ಕುಮಾರ್ ಹೆಗ್ಡೆ ಅಂತವರೇ ಇವರಿಗೆ ಹೀರೋಗಳು. ಅವರು ಆಡುವ ಮಾತು ಎಂತದ್ದು ಬಳಸುವ ಭಾಷೆ ಎಂತದ್ದು…?, ಇಂತವರನ್ನ ಬೆಂಬಲಸುವವರೇ ನರೇಂದ್ರ ಮೋದಿ. ಕಟೀಲ್ ಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಕಟೀಲ್ ನ ಕೂಡಲೇ ವಜಾ ಮಾಡಬೇಕು. ಬಾಯಿ ಮುಚ್ಚಿಕೊಂಡು ಇರಪ್ಪ ಅಂತ ಹೇಳಬೇಕು. ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ. ಅವರಿಗೆ ತಲೆ ಕೆಟ್ಟಿದೆ ಎಂದು ಗರಂ ಆದರು. ಇದನ್ನು ಓದಿ: ರಾಹುಲ್ ಗಾಂಧಿ ಡ್ರಗ್ ಪೆಡ್ಲರ್: ಕಟೀಲ್

ಇದೇ ವೇಳೆ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಟರ್ಮಿನೇಟ್ ಮಾಡುತ್ತಿದ್ದಾರೆ ಎಂಬ ಹೆಚ್‍ಡಿಕೆ ಆರೋಪಕ್ಕೆ ಕೂಡ ದಿನೇಶ್ ಗುಂಡೂರಾವ್ ತಿರುಗೇಟು ನಿಡಿದರು. ಅವರ ಉದ್ದೇಶ ಬೇರೆ, ಮೆಜಾರಿಟಿ ಬರಬಾರದು ಅಂತ. ಕುಮಾರಸ್ವಾಮಿ ಅವರಿಗೆ ಯಾವುದೇ ಬದ್ಧತೆ, ತತ್ವ ಸಿದ್ಧಾಂತ ಯಾವುದೂ ಗೊತ್ತಿಲ್ಲ ಎಂದರು. ಇದನ್ನು ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

ವೈಯಕ್ತಿಕ ಲಾಭಕ್ಕಾಗಿ ರಾಜಕೀಯವನ್ನು ಮಾಡ್ತಾರೆ. ಅವರಿಗೆ ಸುತ್ತ ಹದಿನೈದು ಶಾಸಕರು ಇದ್ರೆ ಸಾಕು. ಬ್ಲಾಕ್ ಮೇಲ್ ರಾಜಕೀಯ ಮಾಡ್ತಾ ಇದ್ದಾರೆ. ಕಿಂಗ್ ಮೇಕರ್ ಆಗಬೇಕು ಅನ್ನುವುದಷ್ಟೆ ಅವರ ಉದ್ದೇಶ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಾ ಇದ್ದಾರೆ. ಯಾವಾಗಾದರೂ ಅವರು ರಾಜ್ಯ ಅಥವಾ ದೇಶದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರಾ ಎಂದು ಗುಂಡೂರಾವ್ ಪ್ರಶ್ನಿಸಿದರು.

Comments

Leave a Reply

Your email address will not be published. Required fields are marked *