ಲೋಕ ಮೈತ್ರಿ ಬಗ್ಗೆ ಎಚ್‍ಡಿಡಿ ಜೊತೆ ದಿನೇಶ್ ಗುಂಡೂರಾವ್ ಚರ್ಚೆ – ಸಭೆಯಲ್ಲಿ ಏನಾಯ್ತು?

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವಿನ ಸೀಟು ಹಂಚಿಕೆ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು.

ನಗರದ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಇಬ್ಬರು ನಾಯಕರು ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಲೋಕಸಭಾ ಮೈತ್ರಿ ಹಂಚಿಕೆಯ ಸ್ಥಾನಗಳ ವಿಚಾರವಾಗಿ ಇಂದು ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ನಮ್ಮಿಬ್ಬರ ನಡುವೆ ಒಳ್ಳೆ ಮಾತುಕತೆ ಆಗಿದ್ದು, ಎರಡು ದಿನಗಳಲ್ಲಿ ಉಭಯ ಪಕ್ಷಗಳ ನಾಯಕರ ಸಭೆ ಕರೆದು ಮಾತುಕತೆ ನಡೆಸುತ್ತೇವೆ. ಆ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಬಳಿಕವಷ್ಟೇ ಹೈಕಮಾಂಡ್‍ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಹಾಲಿ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂದು ಪಕ್ಷದ ಸಭೆಯಲ್ಲಿ ನಿರ್ಧಾರವಾಗಿದೆ. ಆದರೆ ಅದು ಪಕ್ಷದ ತೀರ್ಮಾನ ಮಾತ್ರ. ಮೈತ್ರಿ ವೇಳೆ ಈ ಬಗ್ಗೆ ಕೂಡ ಚರ್ಚೆ ಮಾಡಲಾಗುವುದು. ಹಾಸನ, ಮಂಡ್ಯ ಕ್ಷೇತ್ರಗಳ ಬಗ್ಗೆ ಇಂದು ಏನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಕಾಂಗ್ರೆಸ್ ಪಕ್ಷದ 10 ಸಂಸದರು ತಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಲು ನಿರಾಕರಿಸಿದ್ದು, ಮೈತ್ರಿ ಅನ್ವಯ ಬಿಜೆಪಿ ಪಕ್ಷ ಕೂಡ ರಣತಂತ್ರಗಳನ್ನು ರಚಿಸುತ್ತಿದೆ. ಈ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಗುಂಡೂರಾವ್ ಅವರು, ಪುಲ್ವಾಮಾ ದುರಂತ ಘಟಿಸಿದ್ದು 3.10 ನಡೆದರು ಕೂಡ ಸಂಜೆ 6 ಗಂಟೆಯಾದರೂ ಪ್ರಧಾನಿ ಮೋದಿಯವರು ಸಿನಿಮಾ ಶೂಟಿಂಗ್ ನಲ್ಲಿ ಮುಳುಗಿದ್ದರು. ಇಷ್ಟು ಬೇಜವಾಬ್ದಾರಿಯಿಂದ ಯಾವ ಪ್ರಧಾನಿಯೂ ನಡೆದುಕೊಂಡಿಲ್ಲ. ಸೈನಿಕರು ವಿರುದ್ಧ ದಾಳಿ ನಡೆದರೂ ಪ್ರಧಾನಿಗಳಿಗೆ ಜವಾಬ್ದಾರಿ ಇಲ್ಲ ಎಂದು ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *