ಶಿಥಿಲಗೊಂಡಿದೆ ಸರ್ಕಾರಿ ನರ್ಸರಿ ಶಾಲಾ ಕಟ್ಟಡ- ಅಪಾಯದಲ್ಲಿದೆ ಶಾಲಾ ಮಕ್ಕಳ ಜೀವ

ಬೆಂಗಳೂರು: ನಗರದಲ್ಲಿ ಒಂದು ನರ್ಸರಿ ಶಾಲೆಯಿದೆ. ಈ ಶಾಲೆಯಲ್ಲಿ ಒಟ್ಟು 30 ಪುಟ್ಟ ಮಕ್ಕಳು ಇದ್ದಾರೆ. ಆದರೆ ಶಾಲೆಯ ಕಟ್ಟಡ ನೋಡಿದರೆ ಎದೆ ಜಲ್ ಎನ್ನುವುದು ಪಕ್ಕಾ. ಈ ಶಾಲೆಗೆ ಮಕ್ಕಳನ್ನು ಕಳಿಸುತ್ತಿರೋ ಪೋಷಕರ ಧೈರ್ಯವನ್ನು ಮೆಚ್ಚಲೇ ಬೇಕು.

ಸಿಮೆಂಟ್ ಕಿತ್ತು ಬಂದಿರೋ ಮೇಲ್ಛಾವಣಿ, ಬಿರುಕುಬಿಟ್ಟಿರೋ ಗೋಡೆ. ಮೊದಲ ನೋಟದಲ್ಲಿ ಯಾವುದೋ ಪಾಳು ಬಿದ್ದ ಕಟ್ಟಡದಂತೆ ಕಾಣುವ ಇದು ಸರ್ಕಾರಿ ನರ್ಸರಿ ಶಾಲೆ ಎಂದು ಹೇಳಿದರೆ ನೀವು ನಂಬಲ್ಲೇಬೇಕು. ಬೆಂಗಳೂರಿನ ಎಪಿಎಂಸಿ ಯಾರ್ಡ್ ಪಕ್ಕದಲ್ಲಿರೋ ಅಶೋಕಪುರದ ಸರ್ಕಾರಿ ನರ್ಸರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ 4 ವರ್ಷಗಳೇ ಕಳೆದಿವೆ.

30 ಮಕ್ಕಳಿರುವ ಈ ಶಾಲೆಗೆ ಬೆರಳೆಣಿಕೆಯ ಮಕ್ಕಳು ಮಾತ್ರ ಬರುತ್ತಾರೆ. ಏಕೆಂದರೆ ಕಟ್ಟಡ ಕುಸಿದು ಮಕ್ಕಳ ಜೀವ ಹೋಗುತ್ತೋ ಎನ್ನುವ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಕೆಲ ಪೋಷಕರು ಮಕ್ಕಳ ಜೊತೆ ಶಾಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸಂಬಂಧಪಟ್ಟವರು ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವುದು ಪೋಷಕರ ಆರೋಪ.

ಶಾಲಾ ಕಟ್ಟಡದ ದುಸ್ಥಿತಿ ಬಗ್ಗೆ ಹೇಳಿದರೆ ಶಾಸಕ ಗೋಪಾಲಯ್ಯ ಮತ್ತು ಕಾರ್ಪೋರೇಟರ್ ಮಹಾದೇವು ಮಕ್ಕಳಿಗೆ ರಜೆ ಕೊಟ್ಟು ಕಳಿಸಿ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದಾರಂತೆ. ನಾವು ಬೇರೆ ಕಡೆ ಶಾಲೆ ಮಾಡೋಕೆ ಹೇಳಿದ್ದೇವೆ. ಆದರೆ ಇವರು ಇಲ್ಲೇ ಮಾಡಿದರೆ ಏನ್ ಮಾಡೋದು ಎಂದು ಸ್ಥಳೀಯ ನಾಯಕರೊಬ್ಬರು ತಮ್ಮ ತಪ್ಪನ್ನು ಮುಚ್ಚಿಕೊಂಡರು.

ಮೊದಲೇ ಜನರು ಸರ್ಕಾರಿ ಶಾಲೆಗಳು ಎಂದು ಮಾರುದ್ದ ದೂರ ನಿಲುತ್ತಾರೆ. ಈ ಬಡ ಪುಟ್ಟ ಮಕ್ಕಳ ಜೀವಕ್ಕೇನಾದರು ಆದರೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಲೇಬೇಕು.

Comments

Leave a Reply

Your email address will not be published. Required fields are marked *