ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಬುಧವಾರ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹೋಗಿದ್ದು ಯಾಕೆ ಎನ್ನುವ ಚರ್ಚೆ ಈಗ ಆರಂಭವಾಗಿದ್ದು ಬಿಜೆಪಿ ನಾಯಕರು ಈ ಪ್ರಶ್ನೆಗೆ ಒಂದೊಂದು ಉತ್ತರ ನೀಡಿದ್ದಾರೆ.

ಜೀವ ಭಯ: ಕೃಷ್ಣ ಮಠದಲ್ಲಿ ಮೋದಿ ಜೀ ಅವರಿಗೆ ಜೀವ ಭಯ ಇತ್ತು. ಹೀಗಾಗಿ ಭೇಟಿ ನೀಡಿಲ್ಲ ಎಂದು ಸಂಸದೆ ಶೋಭಾ ಕರಾಂದ್ಲಜೆ ತಿಳಿಸಿದ್ದಾರೆ.

ನೀತಿ ಸಂಹಿತೆ: ಮಾಜಿ ಸಿಎಂ, ಕೇಂದ್ರ ಸಚಿವ ಸದಾನಂದ ಗೌಡರು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ಮಠಕ್ಕೆ ಭೇಟಿ ನೀಡದೆ ಅರ್ಧಗಂಟೆ ಚರ್ಚೆ ಆಗಿದೆ. ಇನ್ನು ಭೇಟಿ ನೀಡಿದ್ದರೆ 1 ಗಂಟೆ ಚರ್ಚೆ ಆಗುತ್ತಿತ್ತು. ನಾವು ನೀತಿ ಸಂಹಿತೆ ಪಾಲನೆ ಮಾಡುವವರು, ಕಾಂಗ್ರೆಸ್‍ನವರು ಉಲ್ಲಂಘನೆ ಮಾಡುವವರು ಎಂದು ಆರೋಪಿಸಿದ್ದಾರೆ.

ಭದ್ರತೆ ಸಮಸ್ಯೆ ಇಲ್ಲ: ಪ್ರಧಾನಿ ಮೋದಿ ಕೃಷ್ಣ ಮಠಕ್ಕೆ ಭೇಟಿ ರದ್ದು ಮಾಡಿರುವ ಕುರಿತು ಸ್ಪಷ್ಟನೆ ನೀಡಿರುವ ಮಠದ ವಕ್ತಾರರು ಇಲ್ಲಿ ಯಾವುದೇ ಭದ್ರತೆಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಪ್ರಧಾನಿಗಳ ಭೇಟಿ ಕಾರ್ಯಕ್ರಮ ಕುರಿತು ಮಾತನಾಡಿದ್ದ ಪೇಜಾವರ ಶ್ರೀಗಳು, ಈ ಹಿಂದೆ ಪ್ರಧಾನಿಗಳಿಗೆ ಉಡುಪಿಗೆ ಬಂದಾಗ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಸದ್ಯ ಈ ಪತ್ರಕ್ಕೆ ಮೋದಿಯವರ ಆಪ್ತ ಕಾರ್ಯದರ್ಶಿಯವರು ನಮ್ಮ ಕಾರ್ಯದರ್ಶಿಗೆ ಕರೆ ಮಾಡಿ, ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ತಿಳಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸಿದರೆ ಪ್ರಧಾನಿ ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎಂದು ಶ್ರೀ ಗಳು ಹೇಳಿದರು.

ಪ್ರಧಾನಿಗಳು ಮಠಕ್ಕೆ ಭೇಟಿ ನೀಡಲಿಲ್ಲ ಎಂಬುವುದರ ಬಗ್ಗೆ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಜನರ ಸಮಸ್ಯೆ ಪರಿಹಾರ ಆಗದಿದ್ದಾರೆ ಬೇಸರ ಉಂಟಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *