ಪ್ರೇಯಸಿಯ ತಂದೆಯ ಷರತ್ತು ಸ್ವೀಕರಿಸಿದ ಪ್ರಿಯಕರ – ಈಗ ಸಾವು ಬದುಕಿನ ಮಧ್ಯೆ ಹೋರಾಟ

ಭೋಪಾಲ್: ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕನೊಬ್ಬ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಪ್ರೇಯಸಿಯ ಮನೆಯಲ್ಲೇ ಗುಂಡು ಹಾರಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಮಧ್ಯಪ್ರದೇಶ ಭೋಪಾಲ್‍ನಲ್ಲಿ ನಡೆದಿದೆ.

ಅತುಲ್ ಲೋಖಂಡೆ(30) ಗುಂಡು ಹಾರಿಸಿಕೊಂಡ ಪ್ರೇಮಿ. ಅತುಲ್ ಭೋಪಾಲ್‍ನ ಶಿವಾಜಿನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದನು. ಆದರೆ ಯುವತಿಯ ತಂದೆ ಈ ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ.

ನಡೆದಿದ್ದೇನು?
ನನ್ನ ಮಗಳನ್ನು ಪ್ರೀತಿಸುತ್ತೀಯಾ ಎಂದರೆ ಸಂಜೆ ನನ್ನ ಮನೆಗೆ ಬಾ, ಮನೆಗೆ ಬಂದು ನೀನು ಸಾಯುವುದನ್ನು ತೋರಿಸು ಎಂದು ಯುವತಿಯ ತಂದೆ ಷರತ್ತು ಹಾಕಿದ್ದರು. ಇದ್ದನ್ನು ಕೇಳಿ ಅತುಲ್ ತನ್ನ ಮಾವನ ಕಾರು ತೆಗೆದುಕೊಂಡು ಯುವತಿಯ ಮನೆಗೆ ತನ್ನ ಮದುವೆಯ ಬಗ್ಗೆ ಮಾತನಾಡಲು ಹೋದನು. ಆಗ ಯುವತಿಯ ತಂದೆ ನನ್ನ ಮಗಳನ್ನು ನಿಜವಾಗಲ್ಲೂ ಪ್ರೀತಿಸುತ್ತಿದ್ದರೆ ನೀನು ಸಾಯುವುದನ್ನು ತೋರಿಸು. ಆಗ ನೀನು ಬದುಕುಳಿದರೆ ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಿಸುತ್ತೇನೆ. ಇಲ್ಲದಿದ್ದರೆ 7 ಜನ್ಮದಲ್ಲಿ ನೀನು ಹುಟ್ಟಿದ್ದರೆ ಆಗ ನನ್ನ ಮಗಳನ್ನು ಮದುವೆ ಮಾಡಿಕೋ ಎಂದು ಯುವತಿಯ ತಂದೆ ಸವಾಲು ಹಾಕಿದ್ದಾರೆ.

ತನ್ನ ಪ್ರೀತಿಯನ್ನು ಸಾಬೀತು ಮಾಡಲು ಅತುಲ್ ದೇಶೀಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡಿದ್ದಾನೆ. ಕೂಡಲೇ ಮನೆಯ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಅತುಲ್ ಮಾವ ಹಾಗೂ ಯುವತಿ ಆತನನ್ನು ಶಿವಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡ ಪರಿಣಾಮ ಅತುಲ್ ಮೆದುಳು ನಿಷ್ಕ್ರೀಯಗೊಂಡಿದೆ. ಸದ್ಯ ಆತ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ಈ ಘಟನೆ ನಡೆಯುವ ಮುನ್ನ ಅತುಲ್ ತನ್ನ ಫೇಸ್‍ಬುಕ್‍ನಲ್ಲಿ ನನ್ನ ಪ್ರೇಯಸಿ ಜೊತೆಯಿರುವ ಸುಮಾರು 40 ಫೋಟೋಗಳನ್ನು ಹಾಕಿ ಅದಕ್ಕೆ ನನ್ನ ಪ್ರೇಯಸಿಯ ತಂದೆ, ಜೀವ ಪಣಕಿಟ್ಟು ನಿನ್ನ ಪ್ರೀತಿ ಸಾಬೀತು ಮಾಡು ಎಂದು ಹೇಳಿದ್ದಾರೆ. ನಾನು ಬದುಕುಳಿದರೆ ನಮ್ಮಿಬ್ಬರ ಮದುವೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ನಾನು ಮೃತಪಟ್ಟರೆ ಮುಂದಿನ ಜನ್ಮದಲ್ಲಿ ನಾವು ಒಂದಾಗುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ನಾನು ಪ್ರೀತಿಸಿರುವ ಹುಡುಗಿ ಸಿಗದಿದ್ದರೆ ನನ್ನ ಬದುಕಿಗೆ ಅರ್ಥವಿಲ್ಲ ಹಾಗೂ ನನ್ನ ನಿರ್ಧಾರಕ್ಕೆ ಯಾರು ಹೊಣೆಯಲ್ಲ. ಹಾಗೆಯೇ ಈ ಸಾವಿನಿಂದ ಮುಂದೆ ಹೆತ್ತವರು ಅವರ ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.

ಅತುಲ್ 13 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿಂದೆ ಕೂಡ ಹುಡುಗಿಯ ತಂದೆ ಅವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಆಗ ಹುಡುಗಿ ಅವನ ಕರೆಗೆ ಉತ್ತರಿಸುತ್ತಿರಲಿಲ್ಲ ಎಂದು ಅತುಲ್ ಸ್ನೇಹಿತ ತಿಳಿಸಿದ್ದಾನೆ. ಸದ್ಯ ಈ ಘಟನೆ ನಡೆದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಯುವತಿಯ ಕುಟುಂಬವನ್ನು ಎಂಪಿ ನಗರಕ್ಕೆ ವರ್ಗಾಯಿಸಲಾಗಿದೆ. ಯುವಕನ ಆತ್ಮಹತ್ಯೆ ಸುತ್ತ ಏನೆಲ್ಲ ನಡೆದಿದೆ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಇನ್ಸ್ ಪೆಕ್ಟರ್ ಜನರೆಲ್ ಧರ್ಮೇಂದ್ರ ಚೌಧರಿ ಹೇಳಿದ್ದಾರೆ.

ಸದ್ಯ ಈ ಘಟನೆ ಕುರಿತು ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ.

Comments

Leave a Reply

Your email address will not be published. Required fields are marked *