ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡ್ಬೇಕು – ಹಿರೇಮಠ್

– ನಾಚಿಕೆ ಬಿಟ್ಟು ಆಪರೇಷನ್ ಕಮಲ ಮಾಡುತ್ತಿದೆ

ಧಾರವಾಡ: ನಮ್ಮ ರಾಜ್ಯದ ರಾಜಕೀಯ ಬಿಕ್ಕಟ್ಟು ನಗೆಪಾಟಲಿನ ವಿಷಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಕೀಳುಮಟ್ಟಕ್ಕೆ ಹೋಗಲು ಶಾಸಕರು ಮಾರಾಟಕ್ಕೆ ಇಳಿದಿದ್ದೇ ಕಾರಣ. ಇದು ಮೂರು ಪಕ್ಷಗಳಲ್ಲಿ ನಡೆದಿದೆ ಎಂದು ಕಿಡಿಕಾರಿದರು. ಕುರ್ಚಿಗಾಗಿ ಮೈತ್ರಿ ಪಕ್ಷ ಕಸರತ್ತು ನಡೆಸುತ್ತಿರುವುದನ್ನು ನೋಡಿದರೆ ನಾಚಿಕೆಯಾಗುತ್ತಿದೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ, ಬಹುಮತ ಇಲ್ಲದೆ ಹೋದರೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ವಿಪಕ್ಷ ಕೂಡಾ ಅದೇ ರೀತಿಯ ಕೆಲಸ ಮಾಡುತ್ತಿದೆ. ನಾಚಿಕೆ ಬಿಟ್ಟು ಆಪರೇಷನ್ ಕಮಲ ಮಾಡುತ್ತಿದೆ. ವಿಪಕ್ಷ ತನ್ನ ಕೆಲಸ ಬಿಟ್ಟು ಬೇರೆ ಏನೋ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕರ ಖರೀದಿ ಮಾಡುತ್ತಿರುವುದು ಮಹಾ ದ್ರೋಹ ಎಂದು ಕಮಲ ನಾಯಕರ ಮೇಲೆ ಕಿಡಿಕಾರಿದರು.

ಸರ್ಕಾರ ನಡೆಸಲು ಬೇರೆಯವರಿಗೆ ಅವಕಾಶ ಕೊಡಬೇಕೋ ಅಥವಾ ಚುನಾವಣೆಗೆ ಹೋಗಬೇಕೋ ಎಂಬ ವಿವೇಚನೆ ರಾಜ್ಯಪಾಲರಿಗೆ ಬಿಡಬೇಕು. ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಅಧಿಕಾರಕ್ಕಾಗಿ ಹಣದ ಆಸೆ ತೋರಿಸುವುದನ್ನು ಕೈಬಿಡಲಿ, ಸ್ಪೀಕರ್ ಈ ಗಂಭೀರ ಸಮಸ್ಯೆಯಲ್ಲಿ ಸಂವಿಧಾನದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಲಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *