ಮೋದಿ ರಾಜ್ಯಕ್ಕೆ ಸ್ಪಂದಿಸಿಲ್ಲ, ಇಲ್ಲಿಯ ಸಂಸದರು ಅನ್ಯಾಯವಾದಾಗ ತುಟಿ ಪಿಟಿಕ್ ಎನ್ನಲಿಲ್ಲ: ಎಸ್.ಆರ್ ಪಾಟೀಲ್

ಧಾರವಾಡ: ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆ ಅನ್ನೋ ಕಲ್ಪನೆ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಕ್ಕೆ ಪ್ರವಾಹದ ನಂತರ ಮೋದಿ ಎರಡನೇ ಸಲ ಬಂದಿದ್ದರು. ಈ ಸಲ ಬಂದಿದ್ರು ರಾಜ್ಯದ ಬಗ್ಗೆ ಏನು ಕೇಳಲಿಲ್ಲ. ರಾಜ್ಯದ ಸಿಎಂ ಅವರೇ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಇದೆಯಾ ಅನ್ನೋ ಕಲ್ಪನೆ ಪ್ರಧಾನಿಗಿಲ್ಲ ಎಂದರು. ಸಿದ್ಧಗಂಗಾ ಮಠದಲ್ಲಿ ಮೋದಿ ಭಾಷಣ ವಿಚಾರವಾಗಿ ಮಾತನಾಡಿದ ಎಸ್.ಆರ್ ಪಾಟೀಲ್ ಮಕ್ಕಳು ದೇವರು ಸಮಾನ ಅವರಲ್ಲಿ ಕಲ್ಮಶ ಇರುವುದಿಲ್ಲ. ಅಂತಹ ಮಕ್ಕಳ ಮುಂದೆ ಭಾವೈಕ್ಯತೆ ವಿಷಯ ಹೇಳಬೇಕು. ಅದರಲ್ಲಿಯೂ ಸಿದ್ದಗಂಗಾ ಮಠ ತ್ರಿವಿಧ ದಾಸೋಹದ ಮಠ, ಅಲ್ಲಿ ಯಾವ ಜಾತಿ ಧರ್ಮ ಕೇಳುವುದಿಲ್ಲ ಎಂದು ತಿಳಿಸಿದರು.

ಮಠಕ್ಕೆ ಬಂದು ಮಕ್ಕಳ ಮುಂದೆ ರಾಜಕೀಯ ಮಾತನಾಡಬಾರದಿತ್ತು ಎಂದ ಅವರು, ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಬಹುದು ಎಂದು ಜನ ಭಾವಿಸಿದ್ದರು. ಆದರೆ ಅವರು ದ್ವೇಷ, ಅಸೂಯೆ ಮಾತು ಆಡಿದ್ದಾರೆ ಎಂದರು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಎಲ್ಲ ಖಾತೆ ಸಿಎಂ ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಸಂಪುಟ ವಿಸ್ತರಣೆ ಮಾಡಿದ ಬಳಿಕ ಈ ಸರ್ಕಾರದ ನಿಜ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

ಮಹದಾಯಿ ಇತ್ಯರ್ಥ ವಿಳಂಬ ವಿಚಾರವಾಗಿ ಮಾತನಾಡಿದ ಪಾಟೀಲ್, ಗೋವಾ ಮಹದಾಯಿ ನೀರನ್ನು ಕಳುವು ಮಾಡಿಕೊಂಡು ಹೋಗಿದೆ. ಕಳವು ಮಾಡಿದ್ದನ್ನು ಗೋವಾ ಸಿಎಂ ಒಪ್ಪಿಕೊಂಡಿದ್ದಾರೆ. ಈ ಭಾಗದಲ್ಲಿ ಇಬ್ಬರು ಕೇಂದ್ರ ಮಂತ್ರಿಗಳಿದ್ದಾರೆ. ಸುಮಲತಾ ಸೇರಿ 26 ಜನ ಸಂಸದರು ಬಿಜೆಪಿಯಿಂದ ಇದ್ದಾರೆ. 117 ಜನ ಬಿಜೆಪಿ ಶಾಸಕರು ಇದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಇವರು ತುಟಿ ಪಿಟಕ್ ಎನ್ನುವುದಿಲ್ಲ ಎಂದು ಕಿಡಿಕಾರಿದರು. ಮಹದಾಯಿ ವಿಷಯದಲ್ಲಿ ಗೋವಾ ರಾಜ್ಯದ ವಿರೋಧ ಪಕ್ಷದ ಒಪ್ಪಿಗೆ ತೆಗೆದುಕೊಂಡು ಬನ್ನಿ ಎಂದು ಪ್ರಧಾನಿ ಹೇಳಿದ್ದಾರೆ. ದೇಶದ ಇತಿಹಾಸದಲ್ಲೇ ಓರ್ವ ಪ್ರಧಾನಿ ಈ ರೀತಿ ಹೇಳಿದ್ದು ಶೇಮ್ ಶೇಮ್ ಎಂದು ಪಾಟೀಲ್ ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *