ಸಿಎಂ ಕುರ್ಚಿ ಕಳೆದುಕೊಂಡ ಎಚ್‍ಡಿಕೆಗೆ ನೀರಿನಲ್ಲಿನ ಮೀನು ಹೊರಗೆ ಬಿಟ್ಟಂತೆ ಆಗಿದೆ: ರೇಣುಕಾಚಾರ್ಯ

ಧಾರವಾಡ: ಬಿಜೆಪಿ ಬಿಟ್ಟು ಬರಲು ಶಾಸಕರು ತಯಾರಿದ್ದರೆಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ಈಗ ಅಧಿಕಾರ ಕಳೆದುಕೊಂಡಿರುವುದು ನೀರಿನಲ್ಲಿನ ಮೀನನ್ನು ಹೊರಗೆ ಬಿಟ್ಟಂತೆ ಆಗಿದೆ ಎಂದು ಹೇಳಿದರು.

ಧಾರವಾಡ ಜಿಲ್ಲೆಯ ಅಮರಗೋಳದಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪರಿಂದಲೇ ಕುಮಾರಸ್ವಾಮಿ 20 ತಿಂಗಳ ಅಧಿಕಾರ ಅನುಭವಿಸಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಹೊರಗೆ ಇಡಬೇಕು ಎಂದು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದರು ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಎಲ್ಲೋ ಬುದ್ಧಿ ಭ್ರಮಣೆ ಆಗಿದೆ ಅನಿಸುತ್ತದೆ. ಹೀಗಾಗಿ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯ ಶಾಸಕರೆಲ್ಲ ಶಿಸ್ತಿನ ಸಿಪಾಯಿಗಳು, ನಾವೆಲ್ಲ ಸಿಂಹದ ಮರಿಗಳು ಇದ್ದಂತೆ ಎಂದರು. ಜೆಡಿಎಸ್ ಮುಳುಗಿ ಹೋಗುತ್ತಿದೆ. ಆ ಪಕ್ಷಕ್ಕೆ ಹೋಗ್ತಾರೆಯೇ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಬಿಜೆಪಿಗೆ ಯಾರೆಲ್ಲ ಬಂದಿದ್ದಾರೆ ಪಕ್ಷ ಅವರನ್ನು ಗೌರವಿಸುತ್ತದೆ ಎಂದರು.

ಈ ವೇಳೆ ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿದ ಅವರು, ರೇಣುಕಾಚಾರ್ಯ ಅಂದರೆ ರೇಣುಕಾಚಾರ್ಯ ಆಗಿಯೇ ಇರುವೆ. ಆನೆ ನಡೆದಿದ್ದೆ ದಾರಿ, ನಮ್ಮ ಕ್ಷೇತ್ರದ ಜನ ಹೀಗೆ ಇರು ಅಂದಿದ್ದಾರೆ ನಾನು ಹಾಗೆ ಇರುವೆ ಎಂದರು. ನಾನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ. ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು. ಹಾಗಂತ ನಾನು ವೀಕ್ ಆಗಿದ್ದೇನೆ ಅಂತಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *