ರಸ್ತೆ ಗುಂಡಿಯಲ್ಲಿ ಕಾಲಿಟ್ಟು ತನ್ನ ಎರಡು ಕಾಲು ಕಳೆದುಕೊಂಡ ಎತ್ತು

ಧಾರವಾಡ: ಹೊಲದಲ್ಲಿ ಉಳುಮೆ ಮಾಡಿ ವಾಪಸ್ ಬರುವಾಗ ರಸ್ತೆ ಗುಂಡಿಗೆ ಕಾಲಿಟ್ಟ ಎತ್ತಿನ ಎರಡು ಕಾಲುಗಳು ಮುರಿದ ಘಟನೆ ಧಾರವಾಡ ನಗರದ ಮುರುಘಾಮಠದ ಬಳಿ ನಡೆದಿದೆ.

ನಗರದ ಗಾಂಧಿಚೌಕದ ನಿವಾಸಿಯಾದ ಶಂಕರ ಉಳ್ಳಾಗಡ್ಡಿ ಎಂಬವರಿಗೆ ಸೇರಿದ ಎತ್ತು ರಸ್ತೆ ಗುಂಡಿಗೆ ಬಿದ್ದು ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದೆ. ನಗರದ ಹೊರವಲಯದ ಕವಲಗೇರಿ ಗ್ರಾಮದ ರಸ್ತೆಯಲ್ಲಿ ಇವರ ಹೊಲಗಳಿವೆ. ಅಲ್ಲಿ ಎತ್ತಿನ ಮಾಲೀಕ ಉಳುಮೆ ಮುಗಿಸಿಕೊಂಡು ವಾಪಸ್ ಬರುವಾಗ ಈ ಘಟನೆ ನಡೆದಿದೆ.

ಕಳೆದ ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ ಎಂದು ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾರೂ ಕ್ಯಾರೇ ಎಂದಿರಲಿಲ್ಲ. ಎತ್ತಿನ ಕುಟುಂಬದವರು ಸ್ಥಳಕ್ಕೆ ಬಂದು ಕಣ್ಣೀರು ಹಾಕಿದ್ದು ಎಲ್ಲರಿಗೆ ನೋವು ತಂದಿದೆ. ಎತ್ತಿನ ಮಾಲೀಕ ಶಂಕರ ಎರಡು ಎತ್ತುಗಳನ್ನು ಮಹಾರಾಷ್ಟ್ರ ದಿಂದ ತಂದಿದ್ದರು. ಒಟ್ಟು 1 ಲಕ್ಷ 40 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಅದರಲ್ಲಿ ಒಂದು ಎತ್ತು ಕಾಲು ಕಳೆದುಕೊಂಡಿದ್ದು, ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಮೊದಲೇ ಅಕಾಲಿಕ ಮಳೆಗೆ ಸಾಕಷ್ಟು ನಷ್ಟದಲ್ಲಿರುವ ರೈತನಿಗೆ ಇದು ಕೂಡಾ ಸಾಕಷ್ಟು ನೋವು ತಂದಿದೆ. ಸದ್ಯ ಈ ಎತ್ತಿಗೆ ಎಷ್ಟೇ ಖರ್ಚು ಮಾಡಿದರೂ ಅದು ಎದ್ದು ಓಡಾಡದ ಸ್ಥಿತಿಯಲ್ಲಿದ್ದು, ಇದಕ್ಕೆ ಇಲ್ಲಿಯ ಜನಪ್ರತಿನಿಧಿಗಳೇ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *