ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಕೇಂದ್ರ ಸಚಿವ ಜೋಶಿ

ಧಾರವಾಡ: ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಧಾರವಾಡ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದಿದ್ದ ಈ ಸಭೆಯಲ್ಲಿ ಕುಂದಗೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಮನೆ ಕಟ್ಟಿಸಿ ಕೊಂಡವರಿಗೆ ಹಣ ಹಾಕುವ ಬದಲು ಬೇರೆಯವರ ಅಕೌಂಟ್‍ಗೆ ಹಣ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು.

ವಾಲೀಕಾರ್ ಎನ್ನುವ ಮಹಿಳೆ ಬದಲು ಗೋಪಾಲ ರಾಮಪೂರ ಎಂಬವರಿಗೆ ಹಣ ಹಾಕಿದ್ದಕ್ಕೆ ಜಿಲ್ಲಾ ಪಂಚಾಯತಿ ಸಿಇಓ ಸತೀಶ್ ಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಸರ್ಕಾರಕ್ಕೆ ಓಪನ್ ಆಗಿ ಟೋಪಿ ಹಾಕುವ ಕೆಲಸ ಮಾಡಲಾಗುತ್ತದೆ ಎಂದ ಪ್ರಹ್ಲಾದ ಜೋಶಿ, ನೀವು ಏನು ಮಾಡ್ತೀರಾ? ಅಧಿಕಾರಿಗಳಿಗೆ ಹೇಳುವುದಕ್ಕೆ ಆಗಾಲ್ವಾ ಎಂದು ಗರಂ ಆದರು. ಈ ವೇಳೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು.

ನಂತರ ಮಾತನಾಡಿದ ಅವರು, 29 ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದು, ವೈದ್ಯರ ಕೊರತೆ ಇಲ್ಲೇ ಅಲ್ಲ ಭಾರತದಲ್ಲೇ ಇದೆ. ಗ್ರಾಮಾಂತರ ಪ್ರದೇಶದ ರಸ್ತೆಗಳಿಗೆ ವಿಶೇಷ ಗಮನ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಹೇಳಿದ್ದೇನೆ. ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನವಾಗಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 11 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಉಳಿದ 9 ಸಾವಿರ ಶೌಚಾಲಯಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಶೌಚಾಲಯ ಕಟ್ಟಿಕೊಂಡವರು ಅದನ್ನು ಬಳಸಲು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗೆ ಶಾಶ್ವತ ಪರಿಹಾರ ಹುಡುಕಿಕೊಳ್ಳಬೇಕು. ಪ್ರಾಯೋಗಿಕವಾಗಿ ಕೆಲವು ಪ್ರಯೋಗ ಮಾಡಬೇಕು ಎಂದರು.

Comments

Leave a Reply

Your email address will not be published. Required fields are marked *