ಕೋವಿಡ್ ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ

ಧಾರವಾಡ: ಕೋವಿಡ್-19 ಸೋಂಕಿತರಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ಮರುಪಾವತಿಸಲು ಧಾರವಾಡ ಜಿಲ್ಲಾಧಿಕಾರಿ ನಿತೆಶ್ ಪಾಟೀಲ್ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ.

ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದ ಶುಲ್ಕದ ಬಗ್ಗೆ ನಿತೇಶ್ ಪಾಟೀಲ್ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ವಿಚಾರಣೆ ನಡೆಸಿ, ವಿವಿಧ ಪ್ರಕರಣಗಳಲ್ಲಿ ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿದ್ದ 19 ಲಕ್ಷ ರೂ. ಅನ್ನು ಮರು ಪಾವತಿಸಲು ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಿದ್ದಾರೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಸಹಾಯವಾಣಿ ಕೇಂದ್ರ ಹಾಗೂ ಲಿಖಿತ ದೂರುಗಳ ಮೂಲಕ ದಾಖಲಾಗಿದ್ದ 80 ಪ್ರಕರಣಗಳನ್ನು ದೂರುದಾರರು ಹಾಗೂ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಈ ಆದೇಶ ನೀಡಿದರು. ಇದನ್ನೂ ಓದಿ: ಉಕ್ರೇನ್‍ನ ಮರಿಯುಪೋಲ್‍ನಲ್ಲಿ ಅರ್ಧ ಗಂಟೆಗೊಂದು ಬಾಂಬ್ ಸ್ಫೋಟ

ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಳ ಸಂದರ್ಭದಲ್ಲಿ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ಪ್ರಮಾಣದಲ್ಲಿ ಶುಲ್ಕ ವಿಧಿಸಲು ಸೂಚಿಸಲಾಗಿತ್ತು. ಕೋವಿಡ್ ರೋಗಿ ದಾಖಲಾದ ಬಳಿಕ ಅವರಿಂದ ಯಾವುದೇ ಶುಲ್ಕ ಪಡೆಯಬಾರದು ಎಂದು ನಿರ್ದೇಶನ ನೀಡಲಾಗಿತ್ತು. ಕೆಲವು ಆಸ್ಪತ್ರೆಗಳಲ್ಲಿ ಎರಡೂ ಕಡೆಗಳಿಂದಲೂ ಹಣ ಪಡೆಯಲಾಗಿದೆ. ಇದನ್ನೂ ಓದಿ: ಬ್ರಿಟಿಷ್ ಕೌನ್ಸಿಲ್ ಜೊತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

ಈ ಪ್ರಕರಣಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹುಬ್ಬಳ್ಳಿಯ ರೋಗಿಯೊಬ್ಬರಿಗೆ 4 ಲಕ್ಷ ರೂ., ಸವದತ್ತಿಯ ವ್ಯಕ್ತಿಯೊಬ್ಬರಿಗೆ 92,125 ರೂ. ಹಾಗೂ ಮತ್ತೊಂದು ಪ್ರಕರಣದಲ್ಲಿ 25 ಸಾವಿರ ರೂ. ಅನ್ನು ಮರು ಪಾವತಿಸಲು ಸೂಚಿಸಿದರು. ಖಾಸಗಿ ಆಸ್ಪತ್ರೆಯೊಂದು ಸ್ವಯಂಪ್ರೇರಿತವಾಗಿ 43 ಪ್ರಕರಣಗಳಲ್ಲಿ 14 ಲಕ್ಷ ರೂ. ಪಾವತಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಅವರ ಕಾರ್ಯವನ್ನು ಅಭಿನಂದಿಸಿದರು.

Comments

Leave a Reply

Your email address will not be published. Required fields are marked *