ಕೊರೊನಾ ಸೋಂಕು ದೃಢಪಟ್ಟ ಹುಬ್ಬಳ್ಳಿ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ

ಧಾರವಾಡ: ಇಂದು ಧಾರವಾಡ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ಕಮರಿಪೇಟೆ ಮುಲ್ಲಾ ಓಣಿಯ 27 ವರ್ಷದ ಈ ವ್ಯಕ್ತಿಯು ರಾಜ್ಯದ 194ನೇ ರೋಗಿಯಾಗಿರುವುದರಿಂದ ರೋಗಿ ನಂಬರ್ 194 ಎಂದು ಗುರುತಿಸಲಾಗುತ್ತಿದೆ.

1. ಈ ವ್ಯಕ್ತಿ ಮಾರ್ಚ್ 16ರಂದು ತನ್ನ ಸಹೋದರನೊಂದಿಗೆ ಹುಬ್ಬಳ್ಳಿಯಿಂದ ಹೈದರಾಬಾದಿಗೆ ವಿ.ಆರ್.ಎಲ್ ಬಸ್ ಮೂಲಕ ಪ್ರಯಾಣಿಸಿದ್ದಾರೆ.
2. ಮಾರ್ಚ್ 17 ರಂದು ಬೆಳಗ್ಗೆ 5.30ಕ್ಕೆ ಹೈದರಾಬಾದ್ ತಲುಪಿ. ಅಂದು ಬೆಳಗ್ಗೆ 8.45ಕ್ಕೆ ಹೈದರಾಬಾದಿನಿಂದ ವಿಮಾನದ ಮುಖಾಂತರ 10.55ಕ್ಕೆ ದೆಹಲಿಗೆ ತಲುಪಿದ್ದಾರೆ.

3. ಮಾರ್ಚ್ 17ರಂದು ದೆಹಲಿಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸವನ್ನು ಮುಗಿಸಿ ಅಲ್ಲೇ ವಾಸ್ತವ್ಯ ಹೂಡಿದ್ದಾರೆ.
4. ಮಾರ್ಚ್ 18ರಂದು ಬೆಳಗ್ಗೆ 5.45ಕ್ಕೆ ದೆಹಲಿಯಿಂದ ಹೊರಟು 9 ಗಂಟೆಗೆ ಆಗ್ರಾ ತಲುಪಿ, ಅಲ್ಲಿಂದ ಸಂಜೆ 5.45ಕ್ಕೆ ಹೊರಟು ಗೋಮತಿ ಎಕ್ಸ್ ಪ್ರೆಸ್ ರೈಲಿನ ಮುಖಾಂತರ ರಾತ್ರಿ 7 ಗಂಟೆಗೆ ದೆಹಲಿ ತಲುಪಿದ್ದಾರೆ.
5. ಮಾರ್ಚ್ 19ರಂದು ಏರ್ ಏಷಿಯಾ ವಿಮಾನದ ಮುಖಾಂತರ ಬೆಳಗ್ಗೆ 5.50ಕ್ಕೆ ದೆಹಲಿಯಿಂದ ಹೊರಟು 8.30ಕ್ಕೆ ಮುಂಬೈ ತಲುಪಿದ್ದಾರೆ. ಅದೇ ದಿನ ರಾತ್ರಿ 9 ಗಂಟೆಗೆ ವಿ.ಆರ್.ಎಲ್. ಬಸ್ ಸಂಖ್ಯೆ ಎಂಹೆಚ್09 ಇಎಂ3230ರ ಮುಖಾಂತರ ಹೊರಟು, ಮಾರ್ಚ್ 20ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ತಲುಪಿದ್ದಾರೆ. ಅಲ್ಲಿಂದ ಆಟೋ ಮುಖಾಂತರ ಹುಬ್ಬಳ್ಳಿ ಮುಲ್ಲಾ ಓಣಿ, ಕಮರಿಪೇಟೆಯ ತನ್ನ ಮನೆಗೆ ಬಂದಿದ್ದಾರೆ.

ಈ ವ್ಯಕ್ತಿಯನ್ನು ರೋಗದ ಸಂಶಯದ ಮೇಲೆ ಏಪ್ರಿಲ್ 6ರಿಂದ ಹೋಟೆಲೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು. ಪ್ರಯಾಣಿಸಿರುವ ವಿಮಾನ, ಬಸ್, ಆಟೋಗಳಲ್ಲಿನ ಸಹಪ್ರಯಾಣಿಕರು ಹಾಗೂ ವಾಸ್ತವ್ಯದ ಸುತ್ತಮುತ್ತ ಪ್ರದೇಶದ ಸಾರ್ವಜನಿಕರಿಗೂ ಸಹ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಸಂಬಂಧಿಸಿದವರು ಕೂಡಲೇ ಕೊರೊನಾ ಸಹಾಯವಾಣಿ 104 ಅಥವಾ 1077 ಕರೆ ಮಾಡಿ ತಮ್ಮ ವಿವರಗಳನ್ನು ಸಲ್ಲಿಸಬೇಕು ಹಾಗೂ ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *