ಕೊರೊನಾ ದೃಢಪಡುವ ಮೊದಲು ಮೂರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ಧಾರವಾಡದ ಸೋಂಕಿತ

ಧಾರವಾಡ: ಗುರುವಾರ ಧಾರವಾಡದಲ್ಲಿ ಮೆಣಸಿನಕಾಯಿ ವ್ಯಾಪಾರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ.

ಈಗ ರೋಗಿ-705 ಧಾರವಾಡಕ್ಕೆ ಆತಂಕ ತಂದಿಟ್ಟಿದ್ದಾರೆ. ಸೋಂಕಿತ ವ್ಯಕ್ತಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಧಾರವಾಡ ಹೊಸಯಲ್ಲಾಪುರದ ಕೋಳಿಕೆರೆ ನಿವಾಸಿಯಾಗಿರುವ ಇವರು ಆಸ್ಪತ್ರೆ ಅಲೆದಾಟಕ್ಕೂ ಮುಂಚೆ ಎಪಿಎಂಸಿ ಸೇರಿದಂತೆ ನಗರದ ವಿವಿಧ ಬೀದಿಗಳಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಧಾರವಾಡದ ಎರಡು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.

ಮಾರ್ಚ್ 5ರಿಂದ 9ರವರೆಗೆ ಸಾಧನಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತ ಚಿಕಿತ್ಸೆ ಪಡೆದುಕೊಂಡಿದ್ದು, ಬಳಿಕ ಮಾರ್ಚ್ 9ಕ್ಕೆ ಸಪ್ತಾಪುರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಮಾರ್ಚ್ 17ರವರೆಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಏಪ್ರಿಲ್ 30 ಮತ್ತು ಮೇ 1ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಪುನಃ ಸಪ್ತಾಪುರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಖಾಸಗಿ ಆಸ್ಪತ್ರೆ ಬಳಿಕ ಹುಬ್ಬಳ್ಳಿ ಕಿಮ್ಸ್ ಗೆ ರೋಗಿ-705 ಅವರನ್ನು ರವಾನೆ ಮಾಡಿದ್ದು, ಆಸ್ಪತ್ರೆ ಅಲೆದಾಟಕ್ಕೂ ಮುನ್ನ ನಗರದ ವಿವಿಧೆಡೆ ಇವರು ಓಡಾಡಿದ್ದಾರೆ. ಹೊಸಯಲ್ಲಾಪುರ, ಶೀಲವಂತರ ಓಣಿ, ಮುರುಘಾಮಠ, ಕೊಪ್ಪದಕೆರೆ, ಎಂ.ಬಿ ನಗರ, ಹಾಗೂ ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ನೀಡಿದ್ದಾರೆ. ಕಳೆದ ತಿಂಗಳು ನಗರದ ವಿವಿಧೆಡೆ ಮೆಣಸಿನಕಾಯಿ ವ್ಯಾಪಾರಿ ಓಡಾಡಿದ್ದು, ಈಗ ಈ ವಿಚಾರ ತಿಳಿದ ಧಾರವಾಡಿಗರಲ್ಲಿ ಆತಂಕ ಸೃಷ್ಟಿಸಿದೆ.

Comments

Leave a Reply

Your email address will not be published. Required fields are marked *