ನಾಯಕ ಜನಾಂಗದ ಸಭೆಯಲ್ಲಿ ಸ್ವಾಮೀಜಿ ಮೇಲೆಯೇ ಮುಗಿಬಿದ್ದ ಕಾರ್ಯಕರ್ತರು!

ಬೆಂಗಳೂರು: ನಗರದ ಕಾನಿಷ್ಕ ಹೋಟೆಲ್ ನಲ್ಲಿ ನಡೆದ ನಾಯಕ ಜನಾಂಗದ ಸಭೆಯಲ್ಲಿ ಕಾರ್ಯಕರ್ತರು ಸ್ವಾಮೀಜಿಯ ವಿರುದ್ಧವೇ ಗಲಾಟೆ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಾಯಕ ಜನಾಂಗದವರಿಗೆ ಕೇವಲ ಒಂದೇ ಒಂದು ಸಚಿವ ಸ್ಥಾನ ನೀಡಿದ್ದರ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಗುರುಕುಲ ಪೀಠದ ಬ್ರಹ್ಮಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಇಂದು ನಗರದ ಕಾನಿಷ್ಕ ಹೋಟೆಲ್ ನಲ್ಲಿ ಸಭೆ ನಡೆದಿತ್ತು. ಈ ವೇಳೆ ಚಿಕ್ಕಬಳ್ಳಾಪುರದ ನಾಯಕ ಜನಾಂಗದ ಕಾರ್ಯಕರ್ತರ ಗುಪೊಂದು ಸಭೆಯ ನಡುವೆಯೇ ಸ್ವಾಮೀಜಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದೆ. ಸಭೆಯಲ್ಲಿ ಸ್ವಾಮೀಜಿಗಳು ಹಾಗೂ ಇನ್ನೊಂದು ಗುಂಪುಗಳ ನಡುವೆ ತೀವ್ರ ಜಟಾಪಟಿ ನಡೆದಿದೆ.

ಈ ವೇಳೆ ಕೆಲ ನಾಯಕ ಜನಾಂಗದ ಕಾರ್ಯಕರ್ತರು ಬ್ರಹ್ಮಾನಂದ ಸ್ವಾಮಿ ನಾಯಕ ಜನಾಂಗದ ಸ್ವಾಮೀಜಿಯೇ ಅಲ್ಲ ಎಂದು ಗಲಾಟೆ ಮಾಡಿದರು. ಬ್ರಹ್ಮಾನಂದ ಸ್ವಾಮೀಜಿಯ ಜಾತಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿಯು ಈ ಹಿಂದೆ ರೈತರಿಗೆ ಸಾಲಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಗಲಾಟೆ ನಡೆಯುತ್ತಿದೆ ಎನ್ನುವ ವಿಚಾರ ತಿಳಿದು ಸ್ಥಳಕ್ಕೆ ಉಪ್ಪಾರಪೇಟೆ ಠಾಣೆಯ ಪೊಲೀಸರು ಆಗಮಿಸಿದ್ದಾರೆ. ವಿಕೋಪಕ್ಕೆ ಹೋಗುತ್ತಿದ್ದ ಗಲಾಟೆಯನ್ನು ಪೊಲೀಸರು ತಡೆದು ಕಾರ್ಯಕರ್ತರನ್ನು ಚದುರಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

https://www.youtube.com/watch?v=wzRuSyP53KU

Comments

Leave a Reply

Your email address will not be published. Required fields are marked *