ಹಾಸನಾಂಬೆ ದರ್ಶನಕ್ಕೆ ನಾಳೆ ಕೊನೆ ದಿನ- ದೇವಾಲಯದಲ್ಲಿ ಭಕ್ತಸಾಗರ

ಹಾಸನ: ವರ್ಷಕ್ಕೊಂದು ಬಾರಿ ದರ್ಶನ ನೀಡೋ ಹಾಸನಾಂಬೆಯ ದರ್ಶನಕ್ಕೆ ನಾಳೆ ಕೊನೆಯ ದಿನ. ದೀಪಾವಳಿ ಹಬ್ಬ ಪ್ರಯುಕ್ತ ಸಾಲು ರಜೆಗಳಿರುವ ಕಾರಣ ಭಕ್ತ ಸಾಗರವೇ ದೇವಿಯ ಸನ್ನಿಧಾನಕ್ಕೆ ಹರಿದು ಬರುತ್ತಿದೆ.

ಅಕ್ಟೋಬರ್ 10 ರಂದು ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಇಂದಿಗೆ ಬಾಗಿಲು ತೆಗೆದು 8 ದಿನಗಳು ಕಳೆದಿವೆ. ಈ ವರ್ಷ ಮೊದಲಬಾರಿಗೆ ಭಕ್ತರಿಗಾಗಿ ದಿನವಿಡೀ ತಾಯಿಯ ದರ್ಶನ ಭಾಗ್ಯವನ್ನು ಏರ್ಪಡಿಸಲಾಗಿತ್ತು. ದೇವಿಯ ದರ್ಶನ ಪಡೆಯಲು ವಿಶೇಷ ಪಾಸ್ ವ್ಯವಸ್ಥೆ ಮಾಡಿದ್ದರೂ, ಇಂದಿಗೂ ಸುಮಾರು 2 ಗಂಟೆಯ ಕಾಲ ಕಾದು ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಪ್ರತಿದಿನ ಹಲವು ಗಣ್ಯರೂ ಸಹ ಬಂದು ದರ್ಶನ ಪಡೆಯುತ್ತಿದ್ದು, ಇಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಕೂಡ ಹಾಸನಾಂಬೆ ತಾಯಿಯ ದರ್ಶನಕ್ಕೆ ಆಗಮಿಸಿ ವಿಶೇಷ ದರ್ಶನ ಪಡೆದರು.

ಸಾರ್ವಜನಿಕರಿಗೆ ನಾಳೆ ತಾಯಿಯ ದರ್ಶನ ಅಂತಿಮವಾಗುತ್ತದೆ. ಆದ್ದರಿಂದ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇದೇ ಶನಿವಾರ 21 ರಂದು ದೇವಿಯ ಗರ್ಭಗುಡಿಯ ಬಾಗಿಲು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಬೆಳಗಿಸುವ ದೀಪ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೆ ಬೆಳಗುತ್ತಲೇ ಇರುತ್ತದೆ ಅನ್ನೋದು ಇಲ್ಲಿನ ವಿಶೇಷ.


 

Comments

Leave a Reply

Your email address will not be published. Required fields are marked *