ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಎಚ್‍ಡಿಡಿ ಹೊಸ ಸೂತ್ರ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಹೊಸ ತಂತ್ರ ರೂಪಿಸಿದ್ದಾರ ಎನ್ನುವ ಪ್ರಶ್ನೆ ಎದ್ದಿದೆ.

ಹೌದು. ಜೆಡಿಎಸ್ ಕೋಟಾದಡಿ ಹೆಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಾಧ್ಯತೆ ಇದೆ. ಈ ಮೂಲಕ ಕುರುಬ ಸಮುದಾಯದ ಮತವನ್ನು ಸೆಳೆಯಲೆಂದೇ ದೇವೇಗೌಡರು ಈ ತಂತ್ರವನ್ನು ಹೂಡಿದ್ದಾರ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.

ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ಸಿನ ಎಲ್ಲ ಆಗು-ಹೋಗುಗಳನ್ನು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ನಿಭಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಯಕರಲ್ಲಿ ಅಸಮಾಧಾನ ಏರ್ಪಟ್ಟರೆ ಸಿದ್ದರಾಮಯ್ಯ ಸರಿ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರ ಮಧ್ಯೆ ವೈಮನಸ್ಸು ಈಗಲೂ ಇದೆ ಎನ್ನುವುದು ಇಬ್ಬರು ನೀಡುತ್ತಿರುವ ಹೇಳಿಕೆಯಿಂದ ಗೊತ್ತಾಗುತ್ತಿದೆ. ಲೋಕಸಭೆಯ ಚುನಾವಣೆಯ ಬಳಿಕ ವಿಶ್ವನಾಥ್ ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ವಿಚಾರಕ್ಕೆ ಸಿದ್ದರಾಮಯ್ಯ ಜಾಸ್ತಿ ಪ್ರತಿಕ್ರಿಯೆ ನೀಡದೇ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದರು.

ಈಗ ಸಂಪುಟದಲ್ಲಿ ಹಳಬರನ್ನು ಕಿತ್ತು ಹಾಕಿ ಹೊಸಬರಿಗೆ ಸ್ಥಾನ ನೀಡಲಾಗುತ್ತಿದ್ದು, ಜೆಡಿಎಸ್ ಪಟ್ಟಿಯಲ್ಲಿ ವಿಶ್ವನಾಥ್ ಅವರ ಹೆಸರು ಇದೆ ಎನ್ನಲಾಗಿದೆ. ಈ ಹಿಂದೆ ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೂ ಸೇರಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಸರ್ಕಾರದ ಒಂದು ಭಾಗವಾಗಿ ವಿಶ್ವನಾಥ್ ಇರಬಾರದು ಎಂಬುದು ಸಿದ್ದರಾಮಯ್ಯ ಅವರು ಬೇಡಿಕೆ ಇಟ್ಟಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಈಗ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ ದೋಸ್ತಿ ಸರ್ಕಾರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆ ಎದ್ದಿದೆ.

ಈ ಹಿಂದೆ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲೆಂದೇ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷರ ಪಟ್ಟವನ್ನು ನೀಡಲಾಗಿದೆ ಎನ್ನುವ ಚರ್ಚೆ ಕೇಳಿ ಬಂದಿತ್ತು.

Comments

Leave a Reply

Your email address will not be published. Required fields are marked *