ಗೋವಾದಿಂದ 3 ಗಂಟೆ ತಡವಾಗಿ ಹೊರಟರೂ 1 ನಿಮಿಷ ಮುಂಚಿತವಾಗಿ ಮುಂಬೈ ತಲುಪಿದ ತೇಜಸ್ ಎಕ್ಸ್ ಪ್ರೆಸ್

ಮುಂಬೈ: ಎಷ್ಟೇ ತಡವಾಗಿ ಹೊರಟರೂ ಸರಿಯಾದ ಸಮಯಕ್ಕೆ ಸ್ಥಳವನ್ನ ತಲುಪಿದ್ರೆ ಅಥವಾ ನಿಗದಿತ ಸಮಯಕ್ಕಿಂತ ಬೇಗನೆ ಅಲ್ಲಿಗೆ ತಲುಪಿದ್ರೆ ಜನರಿಗೆ ಆಶ್ಚರ್ಯವಾಗುತ್ತೆ. ತೇಜಸ್ ಎಕ್ಸ್ ಪ್ರೆಸ್ ರೈಲಿನ ವಿಷಯದಲ್ಲಿ ಆಗಿದ್ದೂ ಇದೇ.

ಭಾನುವಾರದಂದು ತೇಜಸ್ ಎಕ್ಸ್ ಪ್ರೆಸ್ ರೈಲು ಗೋವಾದಿಂದ ಬೆಳಿಗ್ಗೆ 7.30ಕ್ಕೆ ಹೊರಡಬೇಕಿತ್ತು. ಆದ್ರೆ ರೈಲು ಹೊರಟಿದ್ದು 10.30ಕ್ಕೆ. ಅಂದ್ರೆ 3 ಗಂಟೆಯಷ್ಟು ತಡವಾಗಿ ತೇಜಸ್ ಎಕ್ಸ್‍ಪ್ರೆಸ್ ಗೋವಾದಿಂದ ಹೊರಟಿತ್ತು. ಆದರೂ ಸಂಜೆ 7.44ಕ್ಕೆ ಸರಿಯಾಗಿ, ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮುಂಚಿತವಾಗಿ ರೈಲು ಮುಂಬೈ ನಿಲ್ದಾಣಕ್ಕೆ ಆಗಮಿಸಿತ್ತು.

ಕರ್ಮಾಲಿಯಿಂದ ಕುಡಾಲ್‍ವರೆಗೆ ಗಂಟೆಗೆ 153 ಕಿ.ಮೀ ವೇಗದಲ್ಲಿ ಚಲಿಸಿ ನಂತರ ಕುಡಾಲ್‍ನಿಂದ ರತ್ನಗಿರಿವರೆಗೆ ಗಂಟೆಗೆ 137 ಕಿ.ಮೀ ವೇಗದಲ್ಲಿ ಹಾಗೂ ರತ್ನಗಿರಿಯಿಂದ ಪನ್ವೇಲ್‍ಗೆ ಗಂಟೆಗೆ 125 ಕಿಮೀ ವೇಗದಲ್ಲಿ ಚಲಿಸುವ ಮೂಲಕ ತೇಜಸ್ ರೈಲು ತಡವಾಗಿ ಹೊರಟಿದ್ದರಿಂದ ವ್ಯರ್ಥವಾಗಿದ್ದ ಸಮಯವನ್ನ ಸರಿದೂಗಿಸಿತ್ತು.

ಮುಂಬೈ ಹಾಗೂ ಕರ್ಮಾಲಿ ನಡುವೆ ಸಂಚರಿಸುವ 19 ಕೋಚ್‍ಗಳ ತೇಜಸ್ ಎಕ್ಸ್ ಪ್ರೆಸ್ ರೈಲು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸಬಲ್ಲುದಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನ ಒಳಗೊಂಡಿರುವ ಈ ರೈಲಿನಲ್ಲಿ ಸಿಸಿಟಿವಿ, ಫೈರ್ ಡಿಟೆಕ್ಷನ್, ಜಿಪಿಎಸ್ ಆಧರಿತ ಪ್ರಯಾಣಿಕರ ಮಾಹಿತಿ ಪ್ರದರ್ಶನ ವ್ಯವಸ್ಥೆ ಹಾಗೂ ಬಯೋ ವ್ಯಾಕ್ಯೂಮ್ ಶೌಚಾಲಯದ ವ್ಯವಸ್ಥೆಯೂ ಇದೆ. ಪ್ರತಿಯೊಂದು ಸೀಟ್‍ನಲ್ಲೂ ಎಲ್‍ಇಡಿ ಟಿವಿ ಹಾಗೂ ಕಾಲ್ ಬೆಲ್ ಕೂಡ ಇದೆ. ಕೋಚ್‍ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳಿವೆ. ಪ್ರತಿ ಕೋಚ್‍ನಲ್ಲೂ ಕಾಫಿ-ಟೀ ತಯಾರಿಸೋ ಯಂತ್ರಗಳು ಹಾಗೂ ಸ್ನ್ಯಾಕ್ ಟೇಬಲ್‍ಗಳಿವೆ.

 

 

Comments

Leave a Reply

Your email address will not be published. Required fields are marked *