ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ – ಕೊಲಂಬಿಯಾದಲ್ಲಿ ರಾಹುಲ್‌ ವಾಗ್ದಾಳಿ

ಬೊಗೋಟಾ [ಕೊಲಂಬಿಯಾ]: ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ಭಾರತದ (India) ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಇದು ಭಾರತಕ್ಕೆ(India) ಅತಿದೊಡ್ಡ ಬೆದರಿಕೆಯಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ದಕ್ಷಿಣ ಅಮೆರಿಕದ ಕೊಲಂಬಿಯಾ (Colambia) ದೇಶದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾಥಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರಿಗೂ ಒಂದು ಸ್ಥಾನವನ್ನು ಒದಗಿಸುತ್ತದೆ. ಆದರೆ ಸದ್ಯಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲ ಕಡೆಯಿಂದಲೂ ದಾಳಿಗೆ ಒಳಗಾಗಿದೆ. ಆರ್‌ಎಸ್‌ಎಸ್-ಬಿಜೆಪಿ ಸೈದ್ದಾಂತಿಕತೆಯ ಹೃದಯದಲ್ಲಿ ಹೇಡಿತನ ಇದೆ ಎಂದು ದೂರಿದರು.  ಇದನ್ನೂ ಓದಿಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

ಭಾರತವು ತನ್ನ 1.4 ಶತಕೋಟಿ ಜನರೊಂದಿಗೆ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಆದರೆ ಭಾರತವು ಚೀನಾಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ವ್ಯವಸ್ಥೆಯನ್ನು ಹೊಂದಿದೆ. ಚೀನಾ ಬಹಳ ಕೇಂದ್ರೀಕೃತ ಮತ್ತು ಏಕರೂಪದ್ದಾಗಿದೆ. ಭಾರತವು ವಿಕೇಂದ್ರೀಕೃತವಾಗಿದ್ದು ಬಹು ಭಾಷೆಗಳು, ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಧರ್ಮಗಳನ್ನು ಹೊಂದುವ ಮೂಲಕ ಹೆಚ್ಚು ಸಂಕೀರ್ಣವಾದ ವ್ಯವಸ್ಥೆಯನ್ನು ಹೊಂದಿದೆ ಎಂದರು.

ನೋಟು ನಿಷೇಧ ಮತ್ತು ಜಿಎಸ್‌ಟಿ ಬಗ್ಗೆ ಮಾತನಾಡಿ, ಭಾರತ ಸರ್ಕಾರ ಎರಡು ನೀತಿಗಳನ್ನು ತಂದಿತು. ನೋಟು ನಿಷೇಧ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ನಾಶಮಾಡಿತು ಮತ್ತು ದೊಡ್ಡ ಏಕಸ್ವಾಮ್ಯಗಳು ನಮ್ಮ ಆರ್ಥಿಕತೆಯ ದೊಡ್ಡ ಭಾಗವನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿತು. ಜಿಎಸ್‌ಟಿಯಿಂದ ಮತ್ತೆ ಮಧ್ಯಮ ಮತ್ತು ಸಣ್ಣ ವ್ಯವಹಾರಗಳಿಗೆ ಹಾನಿಯಾಗಿದೆ. ಭಾರತದಲ್ಲಿ ಕೇಂದ್ರೀಕೃತ ಮಟ್ಟದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಮೂರು ಅಥವಾ ನಾಲ್ಕು ವ್ಯವಹಾರಗಳು ಇಡೀ ಆರ್ಥಿಕತೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಇವು ಪ್ರಧಾನ ಮಂತ್ರಿಯೊಂದಿಗೆ ನೇರ ಸಂಬಂಧವನ್ನು ಹೊಂದಿವೆ ಎಂದು ಆರೋಪಿಸಿದರು.