ಪೊಲೀಸ್ ಠಾಣೆ ಒಳಗೆಯೇ ನೇಣು ಬಿಗಿದುಕೊಂಡ ಅಪ್ರಾಪ್ತೆ!

ನವದೆಹಲಿ: ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್ ಠಾಣೆಯೊಳಗೆ ನುಗ್ಗಿ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ತಿಲಕ್ ವಿಹಾರ್ ಠಾಣೆಯಲ್ಲಿ ನಡೆದಿದೆ.

ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಬಾಲಕಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ನನ್ನ ಮಗಳಿಗೆ ನೆರೆಮನೆಯವರು ತನ್ನ ಮಗ ಹ್ಯಾಪಿ ಸಿಂಗ್ ನನ್ನು ಮದುವೆಯಾಗುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ಆರೋಪಿಸಿದ್ದಾರೆ.

ನನ್ನ ಮಗಳು ಇನ್ನೂ ಅಪ್ರಾಪ್ತಳಾಗಿದ್ದರಿಂದ ನಾವು ಕುಟುಂಬದವರು ಮದುವೆಗೆ ನಿರಾಕರಿಸಿದ್ದೆವು. ಆಗ ನನ್ನ ಮಗಳನ್ನು ಸಿಂಗ್ ಕಿಡ್ನಾಪ್ ಮಾಡಿದ್ದರು. ಅಲ್ಲದೇ ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 10.30 ವರೆಗೂ ಮಗಳು ಎಲ್ಲೂ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಪೋಲೀಸರು ನನಗೆ ಸುಮಾರು ಶನಿವಾರ ರಾತ್ರಿ 2.30 ಕ್ಕೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದರು. ನಾನು ಪೊಲೀಸ್ ಠಾಣೆಗೆ ಹೋಗಿ ನೋಡಿದಾಗ ನನ್ನ ಮಗಳು ಒಂದು ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಳು. ಇನ್ನೊಂದು ಕೋಣೆಯಲ್ಲಿ ನನ್ನ ಮೂವರು ಗಂಡು ಮಕ್ಕಳನ್ನು ಕೂಡಿ ಹಾಕಲಾಗಿತ್ತು ಎಂದು ತಾಯಿ ತನ್ನ ಅಳಲು ತೋಡಿಕೊಂಡಿದ್ದಾರೆ.

ಶನಿವಾರ ಸುಮಾರು 2 ಗಂಟೆಗೆ ಬಾಲಕಿ ಪೋಲೀಸ್ ಠಾಣೆಗೆ ಬಂದು ನಾನು ಮನೆಗೆ ಹೋಗಲ್ಲ ಎಂದು ಹೇಳಿದ್ದಳು. ಆಗ ವಿಚಾರಿಸಿದಾಗ ಆಕೆಯ ಮನೆಯವರಿಗೂ ಮತ್ತು ನೆರೆಮನೆಯವರ ನಡುವೆ ಜಗಳವಾಗಿದ್ದು ತಿಳಿದುಬಂತು. ಬಳಿಕ ನಾವೇ ಎರಡೂ ಕುಟುಂಬದವರನ್ನು ಪೊಲೀಸ್ ಠಾಣೆಗೆ ಕರೆಸಿ ಮಾತಣಾಡಿದೆವು ಎಂದು ಪೊಲೀಸ್ ಆಯುಕ್ತ (ಪಶ್ಚಿಮ) ವಿಜಯ್ ಕುಮಾರ್ ಹೇಳಿದ್ದಾರೆ.

ಎರಡು ಕುಂಟುಂಬಗಳ ವಿವಾದದ ಬಳಿಕ ಬಾಲಕಿಯನ್ನು ಮನೆಗೆ ಕಳಿಸುವ ಬದಲಿಗೆ ನಾರಿ ನಿಕೇತನಕ್ಕೆ ಕಳಿಸಲು ನಿರ್ಧರಿಸಿದ್ದೆವು. ಆದರೆ ಠಾಣೆಯ ಕೋಣೆಯೊಳಕ್ಕೆ ಹೋಗಿದ್ದ ಬಾಲಕಿ ರೂಮಿನ ಒಳಗಡೆಯಿಂದ ಲಾಕ್ ಹಾಕಿಕೊಂಡಿದ್ದಳು. ನಂತರ ನಾವು ಬಾಗಿಲನ್ನು ಮುರಿದು ನೋಡಿದಾಗ ಬಾಲಕಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಕುರಿತು ವಿಚಾರಣೆ ಪ್ರಾರಂಭಿಸಿದ್ದು, ಪೋಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *