ದೆಹಲಿ ವಾಯುಮಾಲಿನ್ಯಕ್ಕೆ ಪಾಕಿಸ್ತಾನ, ಚೀನಾ ಕಾರಣ – ಬಿಜೆಪಿ ನಾಯಕ

ಲಕ್ನೋ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಉಂಟಾಗಿರುವ ಹೆಚ್ಚಿನ ವಾಯು ಮಾಲಿನ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾ ಕಾರಣ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.

ನಮ್ಮ ದೇಶದ ಮೇಲೆ ವಿಷಕಾರಿ ಅನಿಲವನ್ನು ಹಾಕಲಾಗಿದೆ. ಈ ವಿಷಕಾರಿ ಅನಿಲವನ್ನು ನಮ್ಮ ನೆರೆಯ ಯಾವುದೇ ದೇಶಗಳು ಬಿಡುಗಡೆ ಮಾಡಿರುವ ಸಾಧ್ಯತೆ ಇದೆ. ಪಾಕಿಸ್ತಾನ ಅಥವಾ ಚೀನಾ ನಮಗೆ ಭಯ ಪಡುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರದಾ ಮೀರತ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಪಾಕಿಸ್ತಾನ ಯಾವುದೇ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡಿರಬಹುದು ಎಂದು ನಾವು ಗಂಭೀರವಾಗಿ ಪರಿಗಣಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಕಿಸ್ತಾನ ನಿರಾಶೆಗೊಂಡಿದೆ. ಅಲ್ಲದೆ ಈವರೆಗಿನ ಯಾವುದೇ ಯುದ್ಧದಲ್ಲಿ ಒಂದೂ ಗೆಲವು ದಾಖಲಿಸಲು ಸಾಧ್ಯವಾಗದ ಕಾರಣ ಭಾರತದ ವಿರುದ್ಧ ಎಲ್ಲ ರೀತಿಯ ತಂತ್ರಗಳನ್ನು ಪಾಕಿಸ್ತಾನ ಅನುಸರಿಸುತ್ತಿದೆ ಎಂದು ಶಾರದಾ ಹೇಳಿದ್ದಾರೆ.

ಪಾಕಿಸ್ತಾನ ಭಾರತದೊಂದಿಗೆ ಯುದ್ಧ ಮಾಡಿದಾಗಲೆಲ್ಲ ಅದನ್ನು ಸೋಲಿಸಲಾಗಿದೆ. ಇದೀಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಂದಾಗಿನಿಂದ ಪಾಕಿಸ್ತಾನ ನಿರಾಶೆಗೊಂಡಿದೆ ಎಂದರು.

ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಕೃಷಿ ಸುಡುತ್ತಿರುವುದು ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಅಪಾಯಕಾರಿ ಮಟ್ಟ ತಲುಪಲು ಕಾರಣ ಎಂಬ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ಶಾಸಕ ಟೀಕೆ ವ್ಯಕ್ತಪಡಿಸಿದ್ದಾರೆ.

ವಿನೀತ್ ಅಗರ್ವಾಲ್ ಅವರು ಮಹಾಭಾರತದ ಶ್ರೀಕೃಷ್ಣ ಹಾಗೂ ಅರ್ಜುನನಿಗೆ ಮೋದಿ ಹಾಗೂ ಅಮಿತ್ ಶಾರನ್ನು ಹೋಲಿಸಿದ್ದಾರೆ. ಕೃಷ್ಣಾರ್ಜುನರು ಮಹಾಭಾರತದ ಸಮಸ್ಯೆ ಬಗೆಹರಿಸಿದಂತೆ ಈ ಇಬ್ಬರು ನಾಯಕರು ದೆಹಲಿ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೊಂಡಾಡಿದ್ದಾರೆ.

Comments

Leave a Reply

Your email address will not be published. Required fields are marked *