ಹೆಣ್ಣು ಮಗುವಿನ ಆಸೆಗಾಗಿ ಇಬ್ಬರು ಅಪ್ರಾಪ್ತೆಯರನ್ನು ಕಿಡ್ನಾಪ್‍ಗೈದ ವ್ಯಕ್ತಿ ಸೆರೆ!

ನವದೆಹಲಿ: ಹೆಣ್ಣು ಮಕ್ಕಳು ಬೇಕೆಂದು ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿ ಬಳಿಕ ಅವರನ್ನು ಕ್ಷೇಮವಾಗಿ ಮನೆಗೆ ಹಿಂತಿರುಗಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಕೃಷ್ಣ ದತ್ತ ತಿವಾರಿ(40) ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. 2 ತಿಂಗಳಲ್ಲಿ ಕೃಷ್ಣ ಇಬ್ಬರು ಅಪ್ರಾಪ್ತೆಯರನ್ನು ಅಪಹರಿಸಿದ್ದಾನೆ. ಕೃಷ್ಣ ಹೆಣ್ಣು ಮಕ್ಕಳು ಬೇಕೆಂದು ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿ ತನ್ನ ಮಕ್ಕಳಂತೆ ನೋಡಿಕೊಂಡು ನಂತರ ಅವರನ್ನು ಕ್ಷೇಮವಾಗಿ ಮನೆಗೆ ಹಿಂತಿರುಗಿಸುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಕೃಷ್ಣ ದತ್ತಗೆ 12 ವರ್ಷದ ಹಾಗೂ 14 ವರ್ಷದ ಗಂಡು ಮಕ್ಕಳಿದ್ದಾರೆ. ಶನಿವಾರ ಬೆಳಗ್ಗೆ ಕೃಷ್ಣ ಎರಡನೇ ಬಾರಿ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿ ಮನೆಗೆ ವಾಪಸ್ ಬಿಡುವಾಗ ಸಿಸಿಟಿವಿ ದೃಶ್ಯಾವಳಿ ನೋಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕೃತಿನಗರದ ಜವಾಹರ್ ಕ್ಯಾಂಪ್ ನಿವಾಸಿ ತನ್ನ 8 ವರ್ಷದ ಮಗಳು ಕಾಣೆ ಆಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಎಫ್‍ಐಆರ್ ದಾಖಲಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್‍ಐಆರ್ ದಾಖಲಿಸಿದ ಮಾರನೇ ದಿನ ಅಪ್ರಾಪ್ತೆ ಕ್ಷೇಮವಾಗಿ ಮನೆಗೆ ಹಿಂತಿರುಗಿದ್ದಳು. ಬಳಿಕ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ನಾನು ಸಾರ್ವಜನಿಕ ಶೌಚಾಲಯದಲ್ಲಿದ್ದಾಗ ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು ಎಂದು ಬಾಲಕಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಎರಡು ತಿಂಗಳ ಹಿಂದೆ ಕೃಷ್ಣ ಮತ್ತೊಂದು ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆ ಬಾಲಕಿಗೂ ಕೂಡ ಕೃಷ್ಣ ಯಾವುದೇ ರೀತಿಯಲ್ಲಿ ತೊಂದರೆ ನೀಡಲಿಲ್ಲ. ಆ ಬಾಲಕಿಯನ್ನು ಮಗಳಂತೆ ನೋಡಿಕೊಂಡು ಕ್ಷೇಮವಾಗಿ ಮನೆಗೆ ತಲುಪಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *