ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ ಟ್ರಾಫಿಕ್ ಪೊಲೀಸರಿಂದ ಸಿನಿಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ದರ್ಪ ಮೀತಿ ಮೀರಿ ಹೋಗುತ್ತಿದೆ. ಇತ್ತೀಚೆಗಷ್ಟೆ ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ ತೋರಿಸಿದ್ದರು. ಈಗ ಮತ್ತೆ ಟ್ರಾಫಿಕ್ ಪೊಲೀಸರು ಸಿನಿಮಾ ನಟ ಕಂ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಪೊಲೀಸರಿಂದ ದೌರ್ಜನ್ಯ ಹಾಗೂ ಹಲ್ಲೆಗೊಳಗಾದ ನಟನೇ ಸಂತೋಷ್. ಇವರು ನಗರದ ಚಿಕ್ಕಬಾಣವಾರ ನಿವಾಸಿಯಾಗಿದ್ದು, ಪಾರ್ಟ್ ಟೈಂನಲ್ಲಿ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕನ್ನಡದ ಮುಗಿಲು, ದಿ ಲೋಕಲ್ ಹಾಗೂ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇವರು ನಟನೆಯ ಜೊತೆಗೆ ಉಬರ್ ಕ್ಯಾಬ್ ಕೂಡ ಓಡಿಸುತ್ತಿದ್ದರು. ಕಳೆದ ನವೆಂಬರ್ 3 ರಂದು ಐಟಿಪಿಎಲ್ ನ ಜಿ.ಆರ್.ಟೆಕ್ ಪಾರ್ಕ್ ಬಳಿ ಪ್ಯಾಸೇಂಜರ್ ಒಬ್ಬರು ಉಬರ್ ಬುಕ್ ಮಾಡಿದ್ದರು. ಅವರನ್ನು ಪಿಕ್ ಮಾಡಲು ಬಂದಾಗ ರೋಡಿನಲ್ಲಿ ನಿಲ್ಲಿಸಿದ್ದ ಎಂಬ ಒಂದೇ ಕಾರಣಕ್ಕೆ ವೈಟ್ ಫೀಲ್ಡ್ ಕಾನ್ಸ್ ಟೇಬಲ್ ಸಂತೋಷ್ ನಾಯಕ್ ಕಾರು ತೆಗೆಯುವಂತೆ ಗಲಾಟೆ ಮಾಡಿದ್ದು, ಕಾರ್ ಕೀ ಕಿತ್ತುಕೊಂಡು ನಂತರ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ವೈಟ್ ಫೀಲ್ಡ್ ಟ್ರಾಫಿಕ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕಾನ್ಸ್ ಟೇಬಲ್ ಸಂತೋಷ್ ನಾಯಕ್, ಕಿರಣ್ ಹಾಗೂ ಇತರೆ ಸಿಬ್ಬಂದಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಅಲ್ಲದೇ ಸಂತೋಷ್ ಗೆ ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ, ಮೈಯೆಲ್ಲಾ ಬಾಸುಂಡೆ ಬರೋವರೆಗೂ ಲಾಠಿ ಏಟು ಕೊಟ್ಟಿದ್ದಾರೆ. ನಂತರ ಕಾಡುಗೋಡಿ ಪೊಲೀಸ್ ಸ್ಟೇಷನ್ ಗೆ ಸಂತೋಷ್‍ನನ್ನು ಕರೆದುಕೊಂಡು ಹೋಗಿ ಅಲ್ಲಿ ಕೂಡ ಹಲ್ಲೆ ನಡೆಸಿ ಸಂಜೆ 5 ರಿಂದ ರಾತ್ರಿ 11 ಗಂಟೆವರೆಗೂ ಹೊಡೆದಿದ್ದಾರೆ. ಸಂತೋಷ್ ಯಾರಿಗಾದರೂ ಹೇಳಿದ್ದರೆ ಕೊಲೆ ಕೇಸ್, ರೇಪ್ ಕೇಸ್ ಎಲ್ಲಾ ಬುಕ್ ಮಾಡುತ್ತೀವಿ ಎಂದು ಹೆದರಿಸಿ ಖಾಕಿಗಳು ಕಳಿಸಿದ್ದಾರೆ.

ಸದ್ಯಕ್ಕೆ ನೊಂದ ನಟ ಸಂತೋಷ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷುಲಕ ಕಾರಣಕ್ಕೆ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *