ಬೃಂದಾವನ ಗಾರ್ಡನ್ ಬಳಿ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಬೆಂಗಳೂರು: ವ್ಯಕ್ತಿಯೊಬ್ಬರ ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಬೃಂದಾವನ ಗಾರ್ಡನ್ ಬಳಿಯ ಬಡಾವಣೆ ಪೊದೆಯೊಂದರಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಇಲ್ಲಿನ ನಿವಾಸಿಗಳು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಜೆಸಿಬಿ ಮೂಲಕ ಕಾಲುವೆ ಸ್ವಚ್ಛ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಡಲೇ ನಿವಾಸಿಗಳು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ದೊರೆತಿರುವ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಬೇರೆ ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಪೊಲೀಸರು ಮಾಹಿತಿ ಪಡೆದಿದ್ದು ಸ್ಥಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತದೇಹ ತಮಿಳುನಾಡಿನ ಹೊಸೂರು ಸಮೀಪದ ತೋರಪಲ್ಲಿ ಗ್ರಾಮದ ಮುನಿರಾಜು (35) ಎಂಬವರದ್ದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಂದಹಾಗೇ ಮುನಿರಾಜು ಕಳೆದ ಶನಿವಾರದಿಂದ ಕಾಣೆಯಾಗಿದ್ದು ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಮುನಿರಾಜು ಹೊಸೂರಿನ ರೌಡಿ ಶೀಟರ್ ಜೆಪಿ ಎಂಬುವವನ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚೆಗಷ್ಟೇ ಕೆಲಸ ಬಿಟ್ಟು ಐಡಿಎಂಕೆ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಇಳಿದಿದ್ದ ಎಂಬ ಮಾಹಿತಿ ಲಭಿಸಿದೆ.

ರಾಜಕೀಯ ಪ್ರವೇಶ ಮಾಡಿದ ಬಳಿಕ ಮುನಿರಾಜು ಕೆಲವೊಂದು ರಾಜಿ ಪಂಚಾಯಿತಿ ಹಾಗೂ ಭೂ ವ್ಯವಹಾರಗಳಲ್ಲಿ ಮುಂದೆ ಇರುತ್ತಿದ್ದ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *