ರಾಜೀನಾಮೆಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಡಿಸಿಪಿ ಅಣ್ಣಾಮಲೈ

ಬೆಂಗಳೂರು: ಐಪಿಎಸ್ ಹುದ್ದೆಗೆ ಏಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದುನ್ನು ಡಿಸಿಪಿ ಅಣ್ಣಾಮಲೈ ರಿವೀಲ್ ಮಾಡಿದ್ದಾರೆ.

ಖಡಕ್ ಐಪಿಎಸ್ ಆಧಿಕಾರಿ ಅಣ್ಣಾಮಲೈ ಇಂದೇ ಹುದ್ದೆಗೆ ಡಿಜಿ ಅಂಡ್ ಐಜಿಪಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಲಾಗಿದೆ. ಬಳಿಕ ಗೃಹ ಕಾರ್ಯದರ್ಶಿಗಳು ಅಲ್ಲಿಂದ ಕೇಂದ್ರ ಯುಪಿಎಸ್ಸಿಗೆ ರಾಜೀನಾಮೆ ಪತ್ರ ರವಾನಿಸಲಿದ್ದಾರೆ. ಅಣ್ಣಾಮಲೈ ರಾಜೀನಾಮೆಗೆ ತಂದೆ- ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ.

ರಾಜೀನಾಮೆ ಹಿಂದಿನ ರೋಚಕ ಕಥೆ:
ನಾನು ಸರ್ವಿಸ್‍ಗೆ ಸೇರಿ 9 ವರ್ಷಗಳು ಕಳೆದವು. ಆದರೆ ನಾನು ನನ್ನ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ. ನಾನು ಈ ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೇನೆ. ನಾನು ಇಲ್ಲಿ ಇರುವುದ್ದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ದರು. ಆದರೆ ಕೊನೆ ಪಕ್ಷ ಅವರ ಅಂತ್ಯಕ್ರಿಯೆಗೂ ಹೋಗುವುದಕ್ಕೆ ನನಗೆ ಆಗಲಿಲ್ಲ. ತಂದೆ ತಾಯಿ, ಬಂಧು ಬಳಗ ಎಲ್ಲಾ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು ಏನು ಮಾಡಲಿ ಎಂದರು.

ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದು ಪ್ಲಾನ್ ಮಾಡಿದ್ದೆ. ಚುನಾವಣೆ ಮುಗಿಸದೇ ಹೋದರೆ ಸರಿ ಹೋಗಲ್ಲ ಎಂದು ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್‍ಸಿ ಪರೀಕ್ಷೆ ಬರೆದಿದ್ದೆ. ನನಗೆ ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ನಾನು ಯಾವ ರಾಜಕೀಯಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜೀನಾಮೆ ಬಳಿಕ ಹಿಮಾಲಯ ಟ್ರೆಕ್ಕಿಂಗ್ ಹೋಗುತ್ತೇನೆ. ಅಲ್ಲದೇ ನನ್ನ ಕುಟುಂಬಕ್ಕೆ ಟೈಂ ಸಹ ಕೋಡುತ್ತೇನೆ. ನನ್ನ ಮಗ ಓದುತ್ತಿದ್ದಾನೆ ಅವನ ಜೊತೆ ಇರುತ್ತೇನೆ. 33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ಆದರೆ ನಾನು ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೆ ಬೇರೆ ಜೀವನ ಇದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಸದ್ಯ ಅಣ್ಣಾಮಲೈ ರಾಜೀನಾಮೆ ವಿಚಾರ ತಿಳಿದು ಅಭಿಮಾನಿಗಳು ಅವರ ಮನೆ ಮುಂದೆ ಬಂದಿದ್ದಾರೆ. “ಸರ್, ಮಾಧ್ಯಮದಲ್ಲಿ ನಿಮ್ಮ ರಾಜೀನಾಮೆ ವಿಚಾರ ತಿಳಿದು ಬೇಜಾರಾಯಿತು. ನೀವು ಇರಬೇಕು ಸಾರ್” ಎಂದ ಅಭಿಮಾನಿಗಳು ಅಣ್ಣಾಮಲೈ ಬಳಿ ಕೇಳಿಕೊಂಡರು. ಇದೇ ವೇಳೆ ಅಭಿಮಾನಿಗಳ ಸೆಲ್ಫಿಗೆ ಅಣ್ಣಾಮಲೈ ತಾವೇ ಮೊಬೈಲ್ ಹಿಡಿದು ಫೋಟೋ ತೆಗೆದುಕೊಟ್ಟರು.

Comments

Leave a Reply

Your email address will not be published. Required fields are marked *