ಡಿಸಿಎಂ ಹುದ್ದೆ ಕುತೂಹಲ: ಇಬ್ಬರಿಗೆ ಶಾಕ್-ಮೂವರು ಹೊಸಬರಿಗೆ ಲಕ್!

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ಕಾಲು ವರ್ಷ ಬಾಕಿ ಇದೆ. ಆಗಲೇ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ತಂತ್ರಗಾರಿಕೆ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗಿದ್ರೆ, ಬಿಜೆಪಿ ಪಕ್ಷ ಸಂಘಟನೆ ಪ್ಲಸ್ ಸರ್ಕಾರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಅದಕ್ಕಾಗಿಯೇ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ಸ್ಥಾನಗಳ ಸೃಷ್ಟಿಗೆ ಬಿಜೆಪಿ ಪ್ರತಿಯಾಗಿ ನಾಲ್ಕು ಡಿಸಿಎಂಗಳನ್ನ ಸೃಷ್ಟಿ ಮಾಡ್ತಿದೆ. ಆದರೆ ಈಗಿರುವ ಇಬ್ಬರು ಡಿಸಿಎಂಗಳಿಗೆ ಶಾಕ್ ಕೊಟ್ಟು ಹೊಸದಾಗಿ ಮೂವರ ಡಿಸಿಎಂಗಳನ್ನ ಕುರ್ಚಿಯಲ್ಲಿ ಕೂರಿಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.

ಕಾಂಗ್ರೆಸ್‍ನಲ್ಲಿ 4 ಕಾಂಗ್ರೆಸ್ ಕಾರ್ಯಾಧ್ಯಕ್ಷರ ಸೃಷ್ಟಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಿಜೆಪಿಯಲ್ಲೂ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ಜನರ ಲೆಕ್ಕಚಾರ ಹಾಕಿದೆ. ಡಿಸಿಎಂ ಹುದ್ದೆ ಹೆಚ್ಚಳದ ಬಗ್ಗೆ ಬಿಜೆಪಿ ಹೈಕಮಾಂಡ್‍ನಲ್ಲಿ ಚರ್ಚೆ ನಡೆದಿದ್ದು, ಮೂರು ಡಿಸಿಎಂ ಸ್ಥಾನಗಳನ್ನ 4ಕ್ಕೆ ಏರಿಸುವ ಬಗ್ಗೆ ತಂತ್ರಗಾರಿಕೆ ಶುರು ಮಾಡಿದ್ದಾರಂತೆ. ಜಾತಿ ಆಧಾರದ ಮೇಲೆ, ಪ್ರದೇಶದ ಆಧಾರದ ಮೇಲೆ ಡಿಸಿಎಂ ಸ್ಥಾನ ಸೃಷ್ಟಿ ಸಾಧ್ಯತೆ ಇದ್ದು, ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನ ಘೋಷಿಸಿದ ಮೇಲೆ ಬಿಜೆಪಿ ತಂತ್ರಗಾರಿಕೆ ಚುರುಕುಗೊಳ್ಳುತ್ತೆ ಎನ್ನಲಾಗಿದೆ.

ಈಗ ಹಾಲಿ ಇರುವ ಡಿಸಿಎಂಗಳಲ್ಲಿ ಇಬ್ಬರನ್ನ ಕೆಳಗಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ ಅಂತೆ. ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್‍ನಾರಾಯಣ್, ಲಕ್ಷ್ಮಣ ಸವದಿ ಅವರಲ್ಲಿ ಯಾರು ಔಟ್ ಆಗ್ತಾರೆ..? ಯಾರು ಉಳಿದುಕೊಳ್ತಾರೆ ಅನ್ನೋ ಕುತೂಹಲವಿದೆ. ಅಷ್ಟೇ ಅಲ್ಲ ಅದರ ಜತೆ ಹೊಸದಾಗಿ ಸೇರ್ಪಡೆಯಾಗುವ ಮೂವರು ಡಿಸಿಎಂಗಳು ಯಾರು ಅನ್ನೋದರ ಬಗ್ಗೆಯೂ ಹೆಚ್ಚಿನ ಕುತೂಹಲವಿದೆ. ಡಿಸಿಎಂ ಹುದ್ದೆ ಸೃಷ್ಟಿ, ಬದಲಾವಣೆ ವಿಚಾರ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆಯಲಿದೆ ಎನ್ನಲಾಗಿದ್ದು, ಫೆಬ್ರವರಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *