ವಸೂಲಿಕೋರನಿಗೆ ಕ್ಲಾಸ್ ತೆಗೆದುಕೊಂಡ ಪಿಡಿಒ

ದಾವಣಗೆರೆ: ಗ್ರಾಮ ಪಂಚಾಯ್ತಿಗೆ ಬರ್ತೀವಿ ನಮ್ಮನ್ನು ನೋಡಿಕೊಳ್ಳಬೇಕು ಎಂದು ಭ್ರಷ್ಟಾಚಾರ ವಿರೋಧಿ ರಾಜ್ಯ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಂದು ಹೇಳಿಕೊಂಡು ಪಿಡಿಒಗೆ ವಸೂಲಿಗೆ ನಿಂತ ಒಬ್ಬನಿಗೆ ಪಿಡಿಒ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯ್ತಿ ಗಣೇಶ್ ವಸೂಲಿಕೋರನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಪಿಡಿಒ ಆಗಿದ್ದು ಕಳೆದ ಮೂರು ದಿನಗಳ ಹಿಂದೆ ಗಣೇಶ್‍ರವರು ಕೆಲಸ ಮಾಡುತ್ತಿದ್ದಾಗ, ತಾನು ಭ್ರಷ್ಟಾಚಾರ ವಿರೋಧಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹಾಗೂ ಪತ್ರಕರ್ತ ಎಂದು ಹೇಳಿಕೊಂಡು ವಸೂಲಿಗೆ ನಿಂತಿದ್ದಾನೆ. ಸೋಮವಾರ ಗ್ರಾಮ ಪಂಚಾಯ್ತಿಗೆ ಬರ್ತೀನಿ ನಮ್ಮನ್ನು ನೋಡಿಕೊಳ್ಳಬೇಕು. ನಿಮಗೆ ಬರುವುದರಲ್ಲಿ ನಮಗೂ ಸ್ವಲ್ಪ ಕೊಡಬೇಕು ಎಂದು ಹೇಳಿದ್ದೇ ತಡ, ಪಿಡಿಒ ಗಣೇಶ್ ವಸೂಲಿಕೋರನಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

ಪಿಡಿಒ ಎಂದ ಮೇಲೆ ಸಾಕಷ್ಟು ಆದಾಯ ಬರುತ್ತದೆ. ಅದರಲ್ಲಿ ನಮ್ಮನ್ನೂ ಅಲ್ಪಸ್ವಲ್ಪ ನೋಡಿಕೊಳ್ಳಬೇಕು, ನಾನು ಡಿಗ್ರಿ ಮುಗಿಸಿದ್ದೇನೆ. ಎಲ್ಲಾ ಪಿಡಿಒಗಳಿಗೂ ಕಾಲ್ ಮಾಡ್ತಿದ್ದೀನಿ, ನಿಮ್ಮ ಗ್ರಾಮ ಪಂಚಾಯ್ತಿಗೆ ಬರ್ತೀನಿ ನೀವು ನಮ್ಮನ್ನು ನೋಡಿಕೊಳ್ಳಬೇಕು ಎಂದಿದ್ದಾನೆ. ಇದರಿಂದ ಕೆಂಡಮಂಡಲವಾದ ಪಿಡಿಒ ಗಣೇಶ್, ಏನ್ ನೋಡ್ಕೋಬೇಕ್ರಿ ನಾನು, ಪತ್ರಕರ್ತ, ಭ್ರಷ್ಟಾಚಾರ ವಿರೋಧಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಂತೀರಾ, ವಸೂಲಿ ಮಾಡ್ತೀರಾ, ನಾಚಿಕೆಯಾಗೋದಿಲ್ವಾ ಎಂದು ವಸೂಲಿಕೋರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕ್ಲಾಸ್ ತೆಗೆದುಕೊಂಡ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *