8 ಕೆಜಿ ಚಿನ್ನ, 4 ಕೋಟಿ ರೂ. ಮೌಲ್ಯದ ಹಣದಿಂದ ಲಕ್ಷ್ಮಿಗೆ ಅಲಂಕಾರ!

ಅಮರಾವತಿ: ನವರಾತ್ರಿ ಉತ್ಸವವೂ ಎಲ್ಲೆಡೆ ಅದ್ಧೂರಿಯಾಗಿ ನೆರವೇರುತ್ತಿದೆ. ಆದರೆ ಆಂಧ್ರಪ್ರದೇಶದ ಲಕ್ಷ್ಮೀ ದೇವಸ್ಥಾನ ಒಂದರಲ್ಲಿ ಹಣ ಮತ್ತು ಬಂಗಾರದಿಂದ ಶೃಂಗರಿಸಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ವಿಶಾಖಪಟ್ಟಣಂನ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮೀ ಅವತಾರಂ ದೇವಿಗೆ 4 ಕೋಟಿ ರೂ. ಮೌಲ್ಯದ ನೋಟು ಮತ್ತು 8 ಕೆಜಿ ಚಿನ್ನದಿಂದ ಅಲಂಕರಿಸಲಾಗಿದೆ.

9 ದಿನದ ಉತ್ಸವ ಸಮಯದಲ್ಲಿ ದೇವತೆಯನ್ನು ಪ್ರತೀ ವರ್ಷವು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತಿದ್ದು, ಎಂಟನೇ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ನೋಟು ಮತ್ತು ಚಿನ್ನದಿಂದ ಅಲಂಕರಿಸಿ ಲಕ್ಷ್ಮಿಯನ್ನು ಪೂಜಿಸಲಾಗಿದೆ.

ಹೊಸದಾಗಿ ಪರಿಚಯಿಸಲಾದ 2000 ರೂ. ನೋಟುಗಳು, ನಿಷೇಧಗೊಂಡಿರುವ 500 ರೂ. 1 ಸಾವಿರ ರೂ. ಮುಖಬೆಲೆಯ ನೋಟುಗಳು ಸೇರಿದಂತೆ ಚಲಾವಣೆಯಲ್ಲಿರುವ ಎಲ್ಲ ಕರೆನ್ಸಿ ನೋಟುಗಳನ್ನು ಬಳಸಿ ಲಕ್ಷ್ಮಿ ಕುಳಿತುಕೊಂಡಿದ್ದ ಮಂಟಪವನ್ನು ಶೃಂಗರಿಸಲಾಗಿದೆ.

ಭಕ್ತರು ತಮ್ಮ ಸಂಕಷ್ಟ ನಿವಾರಣೆಗಾಗಿ ದೇಣಿಗೆ ರೂಪದಲ್ಲಿ ನೀಡಿರುವ ನೋಟುಗಳನ್ನು ಇಲ್ಲಿ ಬಳಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Comments

Leave a Reply

Your email address will not be published. Required fields are marked *