ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ: ಅಧಿಕಾರಿಗಳ ರೇಡ್‍ಗೆ ದರ್ಶನ್ ಉತ್ತರ

ಮಂಡ್ಯ: ಇಂದು ಬೆಳಗ್ಗೆ ಚುನಾವಣಾ ಅಧಿಕಾರಿಗಳು ನಟ ದರ್ಶನ್ ಅವರ ಟಿ.ನರಸಿಪುರದಲ್ಲಿರುವ ಫಾರ್ಮ್ ಹೌಸ್‍ಗೆ ಬಂದು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳು ಇವತ್ತು ನಮ್ಮ ಫಾರ್ಮ್ ಹೌಸ್‍ಗೆ ಬಂದಿದ್ದರಂತೆ. ಫಾರ್ಮ್ ಹೌಸ್‍ನಲ್ಲಿ ಹೊಟ್ಟು, ಹಿಂಡಿ, ಬೂಸಾ, ಹಕ್ಕಿಗಳ ಹಿಕ್ಕೆ-ಪಕ್ಕೆ ಸಿಕ್ಕಿರಬಹುದಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

ಯಾರೋ ಹಣ ಹಂಚುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂದಿದ್ದರು. ಅವರ ಕೆಲಸವನ್ನು ಅವರು ಮಾಡಿದ್ದಾರೆ. ಇವತ್ತು ಸಂಜೆ ಮೈಸೂರಿನ ಸಂದೇಶ್ ಹೋಟೆಲ್ ಮೇಲೂ ದಾಳಿ ಮಾಡಬಹುದು. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಸಂದೇಶ್ ಹೊಟೇಲ್‍ನಲ್ಲಿ ಇದ್ದೇನೆ. ಹಾಗಾಗಿ ಅದರ ಮೇಲೂ ದಾಳಿ ಆಗಬಹುದು ಎಂದು ದರ್ಶನ್ ಸುಳಿವು ಕೊಟ್ಟಿದ್ದಾರೆ.

ನಾನು ಪ್ರತೀ ವರ್ಷ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತೇನೆ. ತಪ್ಪಿಸದೇ ವರ್ಷ ವರ್ಷ ಟ್ಯಾಕ್ಸ್ ಕಟ್ಟಿದ್ದೇನೆ. ಸರ್ಕಾರಕ್ಕೆ ಕೊಡುವುದನ್ನು ನಾವು ಕೊಟ್ಟು ಬಿಡಬೇಕು. ಒಂದು ವೇಳೆ ಐಟಿ ಅವರು ಬಂದರೆ ಅವರ ಮುಂದೆ ನನ್ನ ಬಳಿ ಇರುವ ಎಲ್ಲ ದಾಖಲಾತಿಯನ್ನು ತೆಗೆದಿಡುತ್ತೇನೆ ಎಂದು ದರ್ಶನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರತಿದಿನದಂತೆ ಪ್ರಚಾರ ನಡೆಯುತ್ತಿದೆ. ಜನರು ಕೂಡ ನಮಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಾಭಿಮಾನವನ್ನು ಎತ್ತಿ ಹಿಡಿದು ಜನ ಮಾತಾಡುತ್ತಿದ್ದಾರೆ ನಮಗೆ ಅಷ್ಟೇ ಸಾಕು. ಮತ ಮಾರಿಕೊಳ್ಳಬೇಡಿ ಅಂತ ಜನರಿಗೆ ಹೇಳುತ್ತಿದ್ದೇನೆ ಎಂದು ದರ್ಶನ್ ಹೇಳಿದರು.

Comments

Leave a Reply

Your email address will not be published. Required fields are marked *