ಆಯಸ್ಸು ಕಳೆದುಕೊಂಡ ನೀರಿನ ಟ್ಯಾಂಕ್ – ಭಯದಲ್ಲೇ ಬದುಕುತ್ತಿರುವ ಗ್ರಾಮಸ್ಥರು

ಗದಗ: ಸರ್ಕಾರಿ ಶಾಲಾ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿ ನಿಂತಿರೋ ಯಮರೂಪಿ ನೀರಿನ ಟ್ಯಾಂಕ್‍ನಿಂದಾಗಿ ಗ್ರಾಮಸ್ಥರು ಭಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ತನ್ನ ಆಯಸ್ಸು ಕಳೆದುಕೊಂಡಿದ್ದು ಕಬ್ಬಿಣ, ಸಿಮೆಂಟ್ ಉದುರಿ ಬೀಳುತ್ತಿದೆ. ನೀರಿನ ಟ್ಯಾಂಕ್ ಇಂದು ಬೀಳುತ್ತೋ ನಾಳೆ ಬೀಳುತ್ತೋ ಅನ್ನೊ ಭಯದಲ್ಲಿ ಈ ಶಾಲೆಯ ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಶಾಲಾ ಬಿಸಿಯೂಟದ ಕೋಣೆ ಸಹ ಟ್ಯಾಂಕ್‍ನ ಕೆಳಗಡೆ ಇರುವುದರಿಂದ ಅಲ್ಲಿ ಭಯದಿಂದಲೇ ಭೋಜನ ಸಿದ್ಧಗೊಳ್ಳುತ್ತಿದೆ.

    

2001ರ ವೇಳೆ ನಿರ್ಮಾಣವಾದ ಈ ಟ್ಯಾಂಕ್, 1 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಸದ್ಯ ಇದು ಶಿಥಿಲಾವಸ್ಥೆಯಲ್ಲಿದ್ದು, ಕೇವಲ ಶಾಲೆಗೆ ಮಾತ್ರ ಭಯ ಹುಟ್ಟಿಸದೇ ಇಡೀ ಊರಿನ ಜನರನ್ನೂ ಸಹ ಆತಂಕಕ್ಕೀಡು ಮಾಡಿದೆ.

ತುಂಗಾಭದ್ರಾ ನದಿಯಿಂದ ಇಂದಿಗೂ ಈ ಟ್ಯಾಂಕ್‍ಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಂತರ ತಿಮ್ಮಾಪೂರ ಗ್ರಾಮದ ಜನರು ಕುಡಿಯೋದಕ್ಕೆ ಈ ನೀರನ್ನೇ ಬಳಸುತ್ತಾರೆ. ವಿಪರ್ಯಾಸ ಅಂದ್ರೆ ಟ್ಯಾಂಕ್ ಮೇಲೆ ಹತ್ತಲು ಇರುವ ಮೆಟ್ಟಿಲು ತುಕ್ಕು ಹಿಡಿದು ಹಾಳಾಗಿವೆ ಆದರಿಂದ ಟ್ಯಾಂಕ್ ಕ್ಲೀನ್ ಮಾಡೋಕೆ ಸಾಧ್ಯವಾಗದೇ ಕಲುಷಿತ ನೀರನ್ನೇ ಆ ಊರಿನ ಜನರು ಕುಡಿಯುವ ಪರಸ್ಥಿತಿ ಎದುರಾಗಿದೆ. ನೀರಿನ ಟ್ಯಾಂಕ್ ದುರಸ್ಥಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದಕ್ಕೆ ಪರ್ಯಾವಾಗಿ ಇನ್ನೊಂದು ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಜೀವಜಲಕ್ಕಾಗಿ ಕೋಟಿ ಕೋಟಿ ಹಣವನ್ನ ಸರ್ಕಾರ ಖರ್ಚು ಮಾಡ್ತಿವೆ. ಆದರೆ ದೇವರು ಕೊಟ್ರು ಪೂಜಾರಿ ಕೊಡೊಲ್ಲ ಅನ್ನೋ ಹಾಗೆ, ಜಿಲ್ಲಾಧಿಕಾರಿಗಳು ಈ ಹಿಂದೆ ಗ್ರಾಮಪಂಚಾಯಿತಿ ಹಾಗೂ ನೀರು ಸರಬರಾಜು ಇಲಾಖೆಗೆ ಸೂಚಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಜನ ಮತ್ತು ಮಕ್ಕಳು ಭಯದಿಂದಲೇ ಬದುಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *