ಮತ್ತೆ ಜನರನ್ನು ಬೆಚ್ಚಿ ಬೀಳಿಸಲು ಬರ್ತಿದೆ ದಂಡುಪಾಳ್ಯ-3

ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಂಡುಪಾಳ್ಯ ಗ್ಯಾಂಗಿನದ್ದು ಕರಾಳ ಕಥೆ. ಅಂತಹ ಭೀಕರ ಕ್ರೌರ್ಯವನ್ನು ಸಿನಿಮಾ ಮಾಡಿ ಎರಡೆರಡು ಸಲ ಗೆದ್ದವರು ನಿರ್ದೇಶಕ ಶ್ರೀನಿವಾಸ ರಾಜು.

ದಂಡುಪಾಳ್ಯ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಇದೀಗ ಮೂರನೇ ಸಲ ಅದೇ ದಂಡುಪಾಳ್ಯ ಗ್ಯಾಂಗಿನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ದಂಡುಪಾಳ್ಯ ಗ್ಯಾಂಗಿನ ಕಥೆಯನ್ನು ಈ ಹಿಂದೆಯೇ ಎರಡು ಚಿತ್ರಗಳ ಮೂಲಕ ಹೇಳಲಾಗಿತ್ತು. ಇದರ ಮೊದಲ ಭಾಗವಂತೂ ನಿರೀಕ್ಷೆಗೂ ಮೀರಿ ಭಾರಿ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಎರಡನೇ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಇದೇ ಮಾರ್ಚ್ 2ರಂದು ದಂಡುಪಾಳ್ಯ-3 ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಿರ್ದೇಶಕ ಶ್ರೀನಿವಾಸ ರಾಜು ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲು ಸಿದ್ಧರಾಗುತ್ತಿದ್ದಾರೆ. ಬೇರೆ ಬೇರೆ ರೀತಿಯಾದ ನಿಜವಾದ ಕ್ರೌರ್ಯ ಕಥಾನಕಗಳು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿಮಿಮಾಗಳಾಗಿವೆ. ಆದರೆ ಸರಣಿಯಂತೆ ಯಶಸ್ವಿಯಾಗಿ ಮೂರು ಚಿತ್ರಗಳಾಗಿ ತೆರೆ ಕಂಡ ಉದಾಹರಣೆಗಳಿಲ್ಲ. ದಂಡುಪಾಳ್ಯ ಸರಣಿ ಯಶಸ್ವಿಯಾಗಿ ಮೂರನೇ ಭಾಗವೂ ತೆರೆ ಕಾಣಲು ಸಜ್ಜಾಗಿದೆ.

ದಂಡುಪಾಳ್ಯದ ಸತ್ಯಕಥೆ ಅಪ್ಪಟ ರಕ್ತಸಿಕ್ತ. ಅದರ ಕಥೆಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲ. ಜೀವಂತವಾಗಿಯೇ ಮನುಷ್ಯರ ಕತ್ತು ಕುಯ್ದು ಆ ಸದ್ದನ್ನು ಸಂಭ್ರಮಿಸುವ, ಹೆಣ್ಣು-ಗಂಡೆನ್ನದೆ ಶವವನ್ನೇ ಸಂಭೋಗಿಸುವ ಪರಮ ವಿಕೃತಿ ದಂಡುಪಾಳ್ಯ ಗ್ಯಾಂಗಿನದ್ದು. ಇಂತಹ ಸಿನಿಮಾವನ್ನು ನಿರ್ಮಿಸಿವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ಹಿಂದೆ ಎರಡು ಆವೃತ್ತಿಯ ಮೂಲಕ ಶ್ರೀನಿವಾಸ ರಾಜು ಅದರಲ್ಲಿ ಗೆದ್ದಿದ್ದಾರೆ. ಈಗ ಮೂರನೇ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ.

ಮೂರನೇ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಆದ್ದರಿಂದ ಈ ಬಾರಿ ಹ್ಯಾಟ್ರಿಕ್ ಗೆಲುವು ದಂಡುಪಾಳ್ಯ ಚಿತ್ರತಂಡಕ್ಕೆ ಸಿಗುವ ನಿರೀಕ್ಷೆ ಇದೆ. ಇದನ್ನೂ ಓದಿ: 17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

Comments

Leave a Reply

Your email address will not be published. Required fields are marked *