ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

– ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್

ನವದೆಹಲಿ/ಇಸ್ಲಾಮಾಬಾದ್‌: ಭಾರತೀಯ ರಕ್ಷಣಾ ಪಡೆಗಳ ದಾಳಿಗೆ ತತ್ತರಿಸಿರುವ ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ.

ಕೈಯಲ್ಲಾಗದವರು ಮೈ ಪರಚಿಕೊಂಡದೇ ಸೇನೆ ವಿರುದ್ಧ ಸೆಣಸಲಾಗದ ಪಾಕ್‌ ಶೆಲ್ ದಾಳಿ (Missile Attack) ನಡೆಸಿ ಅಮಾಯಕರನ್ನ ಟಾರ್ಗೆಟ್‌ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ (Himachal Pradesh) ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

10 ಸಾವಿರ ಮಂದಿ ಸ್ಥಳಾಂತರ?
ಭಾರತ ಮತ್ತು ಪಾಕ್‌ (India vs Pakistan) ನಡುವೆ ಉದ್ವಿಗ್ನತೆ ಹೆಚ್ಚಿದ ಬೆನ್ನಲ್ಲೇ ಗಡಿ ಗ್ರಾಮಗಳಿಂದ ಸುಮಾರು 10,000 ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈ ಹೊತ್ತಿನಲ್ಲೇ ಪಾಕ್‌ ಅಮಾಯಕರನ್ನ ಗುರಿಯಾಗಿಸಿ ಶೆಲ್‌ ದಾಳಿ ನಡೆಸಿದೆ. ಪಾಕ್‌ ದಾಳಿಯಿಂದ ಪೂಂಚ್‌ ಜಿಲ್ಲೆ ಮಾತ್ರವಲ್ಲದೆ, ಉರಿ, ಬಾರಾಮುಲ್ಲಾ, ಕರ್ನಾ, ತಂಗ್ಧರ್, ಮೆಂಧರ್‌ ಸೇರಿದಂತೆ ವಿವಿಧೆಡೆ ನಾಗರಿಕರ ಮನೆ ಮಳಿಗೆಗಳು ಹಾನಿಗೊಳಗಾಗಿವೆ.

ಹೀಗಾಗಿ ಪಾಕಿಸ್ತಾನಕ್ಕೆ ಸೈನ್ಯದ ಜೊತೆ ಹೋರಾಡುವ ಶಕ್ತಿ ಇಲ್ಲ-ಅದಕ್ಕೆ ನಾಗರಿಕರ ಮೇಲೆ ದಾಳಿ ಮಾಡ್ತಿದೆ-ಬೆಳಗ್ಗೆ 4-30 ಕ್ಕೂ ಸ್ಫೋಟದ ಸದ್ದು ಕೇಳಿದೆ ಎಂದು ಜಮ್ಮುವಿನ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್
ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳು ಇಂದು ಕೂಡಾ ಬಂದ್ ಆಗಲಿದೆ. ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲಾಗಿದೆ.

ಮಿಲಿಟರಿ ಕಂಟೋನ್ಮೆಂಟ್‌ಗಳೇ ಶಿಫ್ಟ್‌
ಇನ್ನೂ ಭಾರತೀಯ ರಕ್ಷಣಾ ಪಡೆಗಳ ದಿಟ್ಟ ಉತ್ತರಕ್ಕೆ‌ ಕಕ್ಕಾಬಿಕ್ಕಿಯಾಗಿರುವ ಪಾಕಿಸ್ತಾನದ ಸಿಂಧ್, ಪಂಜಾಬ್ ಕಂಟೋನ್ಮೆಂಟ್‌ಗಳಲ್ಲಿ ಭೀತಿ ಹೆಚ್ಚಾಗಿದೆ. ಹೀಗಾಗಿ ಮಿಲಿಟರಿ ಕಂಟೋನ್ಮೆಂಟ್‌ಗಳನ್ನ ಸಾಮೂಹಿಕವಾಗಿ ಸ್ಥಳಾಂತರ ಮಾಡಿಕೊಳ್ಳುತ್ತಿದೆ.