ಕಂಬಕ್ಕೆ ಕಟ್ಟಿ ಥಳಿಸಿ, ನೀರು ಕೇಳಿದ್ದಕ್ಕೆ ಮೂತ್ರ ಕುಡಿಸಿದ್ರು- ವ್ಯಕ್ತಿ ಸಾವು

ಚಂಡೀಗಢ: ತಮ್ಮೊಂದಿಗೆ ಗಲಾಟೆ ಮಾಡಿದ್ದಾನೆ ಎಂದು ಕಿಡಿಗೇಡಿಗಳು ದಲಿತ ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿ, ಕುಡಿಯಲು ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ ಅಮಾನುಷ ಘಟನೆ ಪಂಜಾಬ್‍ನಲ್ಲಿ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ.

ನವೆಂಬರ್ 7ರಂದು ಪಂಜಾಬ್‍ನ ಸಂಗೂರ್‌ನಲ್ಲಿ ಈ ಘಟನೆ ನಡೆದಿತ್ತು. 37 ವರ್ಷದ ದಲಿತ ವ್ಯಕ್ತಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ ಆತನಿಗೆ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಗಂಭೀರ ಗಾಯಗೊಂಡಿದ್ದ ಸಂತ್ರಸ್ತನಿಗೆ ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 9 ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದಲಿತ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಚಂಗಲಿವಾಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತ ಹಾಗೂ ಗ್ರಾಮದ ರಿಂಕು, ಆತನ ಸ್ನೇಹಿತರೊಡನೆ ವಾಗ್ವಾದ ನಡೆದಿತ್ತು. ಈ ಗಲಾಟೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಆದರೆ ಇದಾದ ಬಳಿಕ ಮಾತುಕತೆಗೆಂದು ರಿಂಕು ಸಂತ್ರಸ್ತನನ್ನು ತನ್ನ ಮನೆಗೆ ಕರೆಸಿಕೊಂಡಿದ್ದನು. ಈ ವೇಳೆ ಸಂತ್ರಸ್ತನ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿದ್ದರು. ಆಗ ಬಾಯರಿಕೆಯಿಂದ ಸಂತ್ರಸ್ತ ನೀರು ಕೇಳಿದಾಗ ಬಲವಂತವಾಗಿ ಆತನಿಗೆ ರಿಂಕು ಮತ್ತು ಆತನೊಟ್ಟಿಗೆ ಇದ್ದವರು ಮೂತ್ರ ಕುಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ರಿಂಕು, ಅಮರ್‍ಜೀತ್ ಸಿಂಗ್, ಲಕ್ಕಿ, ಬೀಟಾ ತಲೆಮರಿಸಿಕೊಂಡಿದ್ದು, ನಾಲ್ವರ ಮೇಲೂ ಸೆಕ್ಷನ್ 302 (ಕೊಲೆ) ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ರಾಜ್ಯದ ಪರಿಶಿಷ್ಟ ಜಾತಿ ಆಯೋಗ ಕೂಡ ಈ ಕುರಿತು ವಿವರ ಕೇಳಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *