ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

ಲಕ್ನೋ: ಗುಟ್ಕಾವನ್ನು ತಮ್ಮೊಂದಿಗೆ ಹಂಚಿಕೊಳ್ಳಲಿಲ್ಲವೆಂದು ಸಿಟ್ಟಿಗೆದ್ದ ಮೇಲ್ವರ್ಗದ ಇಬ್ಬರು ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮಥುರಾದ ಸಪೋಹ ಗ್ರಾಮಲ್ಲಿ ನಡೆದಿದೆ.

ಸಪೋಹ ಗ್ರಾಮದ ಪರ್ದೇಶಿ (35) ಗಾಯಗೊಂಡ ದಲಿತ ವ್ಯಕ್ತಿ. ಶುಕ್ರವಾರ ಗ್ರಾಮದ ಅಂಗಡಿ ಬಳಿ ಗುಟ್ಕಾವನ್ನು ಹಂಚಿಕೊಳ್ಳುವ ವಿಚಾರಕ್ಕೆ ಅದೇ ಗ್ರಾಮದ ರಾಹುಲ್ ಠಾಕೂರ್ ಹಾಗೂ ರಾಜು ಎಂಬವರ ನಡುವೆ ಗಲಾಟೆ ಏರ್ಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ಪರ್ದೇಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿದ್ದ ಸಿಮೇಎಣ್ಣೆಯನ್ನು ಸುರಿದು ಬೆಂಕಿ ಹಂಚಿ ಪರಾರಿಯಾಗಿದ್ದಾರೆ.

ಗಾಯಗೊಂಡಿದ್ದ ಪರ್ದೇಶಿಯನ್ನು ಅಂಗಡಿ ಮಾಲೀಕ ಹಾಗೂ ಗ್ರಾಮಸ್ಥರು ಕೂಡಲೇ ಮಥುರಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 20 ರಷ್ಟು ಸುಟ್ಟಗಾಯಗಳಾಗಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪರ್ದೇಶಿ ಸಹೋದರ ಮಥುರಾ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 325, 504, 506 ಮತ್ತು ಎಸ್ಸಿ-ಎಸ್ಟಿ ಪ್ರಕರಣದಡಿ ದೂರು ದಾಖಲಿಸಿಕೊಂಡ ಪೊಲೀಸರು, ರಾಹುಲ್ ಠಾಕೂರ್ ಹಾಗೂ ರಾಜು ಎಂಬ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ಪೊಲೀಸ್ ಅಧಿಕಾರಿ ವಿನಯ್ ಚೌಹಾಣ್, ಶುಕ್ರವಾರ ಪರ್ದೇಶಿ ಎಂಬವರು ಗ್ರಾಮದ ಅಂಗಡಿಯಲ್ಲಿ ಗುಟ್ಕಾ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಬಳಿಯಿದ್ದ ಆರೋಪಿಗಳು ಗುಟ್ಕಾವನ್ನು ಹಂಚಿಕೊಳ್ಳುವಂತೆ ಪರ್ದೇಶಿಗೆ ಕೇಳಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ, ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *