ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಗೆ ಸ್ಫೋಟಕ ಟ್ವಿಸ್ಟ್

ಬೆಂಗಳೂರು: ಡಿಕೆಶಿ, ಮತ್ತವರ ಸಂಬಂಧಿಕರು, ಆಪ್ತರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆಯ ದಾಳಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೇರಿಸುವ ಪ್ರಯತ್ನ ನಡೆದಿತ್ತು ಎನ್ನುವ ಸುದ್ದಿಯೊಂದು ಹರಿದಾಡಲು ಆರಂಭವಾಗಿದೆ.

ಐಟಿ ರೇಡ್‍ಗೂ 20 ದಿನ ಮುನ್ನ ಕೇಂದ್ರ ಸಚಿವರೊಬ್ಬರು ಡಿಕೆ ಶಿವಕುಮಾರ್‍ಗೆ ಫೋನ್ ಮಾಡಿ, ಬಿಜೆಪಿ ಸೇರುವಂತೆ ಆಹ್ವಾನ ಕೊಟ್ಟಿದ್ದರಂತೆ. ನಿಮ್ಮಂತ ಡೈನಾಮಿಕ್ ಲೀಡರ್ ಪಕ್ಷಕ್ಕೆ ಬೇಕು. ನೀವು ಒಕ್ಕಲಿಗ ಸಮುದಾಯದ ದೊಡ್ಡ ನಾಯಕರು ಎಂದು ಹೇಳಿದ್ದರಂತೆ.

ಹೆಸರು ಪ್ರಸ್ತಾಪಿಸದೆ ನಿಮ್ಮ ನಾಯಕರೇ ಪಕ್ಷಕ್ಕೆ ಬಂದಿದ್ದಾರೆ. ನೀವು ಬಂದರೆ ಗೌರವ, ಸ್ಥಾನಮಾನ ಸಿಗುತ್ತದೆ ಎಂದು ಆ ಸಚಿವರು ಹೇಳಿದ್ದರಂತೆ. ಆದರೆ ಈ ಆಹ್ವಾನವನ್ನ ಡಿಕೆ ಶಿವಕುಮಾರ್ ತಿರಸ್ಕರಿಸಿದ್ದರಂತೆ. ಇದಾದ ಬಳಿಕವೇ ಐಟಿ ರೇಡ್ ಆಗಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.

ಸುದ್ದಿ ಶುದ್ಧ ಸುಳ್ಳು: ಐಟಿ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲವೇ ಇಲ್ಲ. ದೆಹಲಿ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕೇಂದ್ರ ನಾಯಕರೂ ಮಾತುಕತೆ ನಡೆಸಿಲ್ಲ. ಆಹ್ವಾನ ನೀಡಲಾಗಿದೆ ಎನ್ನುವುದೆಲ್ಲ ಶುದ್ಧ ಸುಳ್ಳು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಮುಖಂಡ ಸುರೇಶ್ ಕುಮಾರ್ ಸಹ ಈ ವಿಚಾರಕ್ಕೆ ಧ್ವನಿಗೂಡಿಸಿದ್ದಾರೆ.

ಸದ್ಯಕ್ಕೆ ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲ್ಲ. ನನ್ನ ಬಗ್ಗೆ ಏನೇನು ಸುದ್ದಿ ಹರಿದಾಡುತ್ತವೋ ಹರಿಯಲಿ ಬಿಡಿ ಅಂತ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಮಧ್ಯೆ, ಡಿಕೆಶಿ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಅಂತ ತಿಳಿದುಬಂದಿದೆ. ಆಗಸ್ಟ್ 12, 13, 14ರಂದು ರಾಜ್ಯ ಪ್ರವಾಸದ ಸಮಯದಲ್ಲಿ ಅಮಿತ್ ಶಾ ಈ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಐಟಿ ವಿಚಾರಣೆ ಬಳಿಕ ಡಿಕೆಶಿ ಸ್ನೇಹದ ಬಗ್ಗೆ ದ್ವಾರಕಾನಾಥ್ ಗುರೂಜಿ ಹೇಳಿದ್ದೇನು?

Comments

Leave a Reply

Your email address will not be published. Required fields are marked *