ಅವನ್ಯಾರೋ ಎಂಪಿ ಬಹಳ ಬುದ್ದಿವಂತ, ಅವನಷ್ಟು ನಾವು ಓದಿಲ್ಲ – ತೇಜಸ್ವಿ ಸೂರ್ಯಗೆ ಡಿಕೆಶಿ ಟಾಂಗ್

ಬೆಂಗಳೂರು: ಅವನ್ಯಾರೋ ಎಂಪಿ ಬಹಳ ಬುದ್ದಿವಂತ. ಅವನಷ್ಟು ನಾವು ಓದಿಲ್ಲ, ಮಾಡಿಲ್ಲ. ಮುಸ್ಲಿಂ ಸಮಯದಾಯದವರನ್ನು ಪಂಕ್ಚರ್ ಹಾಕೋರು ಅಂದ ಎಂದು ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಪರ್ಲ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕೋವಿಡ್ ವಾರಿಯರ್ಸ್‍ಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಬೌರಿಂಗ್ ಹಾಸ್ಪಿಟಲ್ ಜಾತಿ ಧರ್ಮದ ಆಧಾರದ ಮೇಲಿದೆಯಾ? ಪಂಕ್ಚರ್ ಇವರು ಹಾಕ್ತಾರಾ? ರಾಜ್ಯದ ಎಲ್ಲ ಧರ್ಮದವರ ಸಾವಿನ ಹೆಣ ಹೊತ್ತವರು ಮುಸ್ಲಿಂ ಸಮುದಾಯದವರು. ಈಗ ಮಾತಾಡೋ ಗಂಡುಗಳು ಯಾರಾದರೂ ಹೆಣಗಳಿಗೆ ಕೈ ಕೊಟ್ಟಿದ್ದಾರಾ? ಸುರೇಶ್ ಅಂಗಡಿಯವರ ಹೆಣವನ್ನು ಅವರ ಕುಟುಂಬಸ್ಥರೂ ನೋಡುವುದಕ್ಕೆ ಆಗಲಿಲ್ಲ. ಇದೇನಾ ದೇಶದ ಸಂಸ್ಕೃತಿ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ ವಿಷ ಬೀಜ – ಡಿಕೆಶಿ ಕಿಡಿ

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತರು. 36 ಜನ ಕುಟುಂಬಸ್ಥರ ನೋವನ್ನು ನಾನು ವೀಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿಸುತ್ತಿದ್ದೇನೆ. 4 ಲಕ್ಷ ಜನ ಕೋವಿಡ್ ನಿಂದ ಸತ್ತರು. ಬೆಡ್ ಸಿಗದೆ, ಓಡಾಡಿ ನೂರಾರು ಜನ ಸತ್ತರು. ಆದರೆ ಬಿಜೆಪಿ ಸರ್ಕಾರ ಪರಿಹಾರ ಕೊಡಬೇಕಾಗುತ್ತದೆ ಅಂತ ಆ ಲೆಕ್ಕವನ್ನೇ ತೆಗೆದುಬಿಟ್ಟಿದ್ದಾರೆ. ಅಸೆಂಬ್ಲಿ ಬಂದಾಗ ನಾವು ವಿಚಾರ ಎತ್ತಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ಯಾರಿಗೂ ಸಹಾಯ ಮಾಡಿಲ್ಲ. ವ್ಯಾಪಾರಿಗಳಿಗೆ ಯಾವೊಂದು ಟ್ಯಾಕ್ಸ್ ಕಡಿಮೆ ಮಾಡಲಿಲ್ಲ. ಸರ್ಕಾರ ಒಬ್ಬರಿಗೂ ನೆರವಾಗಲಿಲ್ಲ. ನನ್ನ ವಿರುದ್ದ ಬೇಕಾದಷ್ಟು ಟೀಕೆ ಟಿಪ್ಪಣಿ ಮಾಡುತ್ತಾರೆ. ನಾನು ಮುಸ್ಲಿಂರನ್ನು ಓಲೈಕೆ ಮಾಡುತ್ತೇನೆ. ಹಾಗೇ ಹೀಗೆ ಅಂತ ಬೇಕಾದಷ್ಟು ಮಾತಾಡಿಬಿಟ್ಟರು. ಹೌದು, ನಾನು ಒಪ್ಪಿಕೊಳ್ಳುತ್ತೇನೆ ಮುಸ್ಲಿಂರೆಲ್ಲ ನನ್ನ ಸಹೋದರರು ಎಂದರು. ಇದನ್ನೂ ಓದಿ: ಬೆಡ್ ದಂಧೆ ನಡೆಯೋದು ಹೇಗೆ ಅನ್ನೋದನ್ನ ವಿವರಿಸಿದ ತೇಜಸ್ವಿ ಸೂರ್ಯ

ವಿನಯ್ ಕುಲಕರ್ಣಿಯನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ. ಅದರಲ್ಲಿ ಅನುಮಾನವೇ ಬೇಡ ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ವಿನಯ್ ಕುಲಕರ್ಣಿ ವಿರುದ್ದ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಬಹಳ ಸಂತೋಷ, ಆದರೆ ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನು? ಇವರಿಗೊಂದು ಕಾನೂನಾ ಎಂದು ಪ್ರಶ್ನೆ ಮಾಡಿದರು.

Comments

Leave a Reply

Your email address will not be published. Required fields are marked *