‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

ಬೆಂಗಳೂರು: ದಕ್ಷಿಣ ಭಾರತ ಸೇರಿದಂತೆ ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಭಾಗದಲ್ಲಿ ‘ಫನಿ’ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿಗೆ ಹೊರಡುವ ವಿವಿಧ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೇ ವಲಯ ರದ್ದು ಮಾಡಿದ್ದು, ಗುರುವಾರ ರಾತ್ರಿ 10 ರೈಲುಗಳ ಸಂಚಾರ ರದ್ದಾಗಿದೆ. ಚಂಡಮಾರುತದ ಪ್ರಭಾವದಿಂದ ಉಂಟಾಗಬಹುದಾದ ಅಪಾಯದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನಿಂದ ಹೊರಟು ಮೈಸೂರು, ಪುರಿ, ಭುವನೇಶ್ವರ ಮಾರ್ಗವಾಗಿ ಒರಿಸ್ಸಾಗೆ ಪ್ರಯಾಣ ಬೆಳೆಸಬೇಕಾಗಿದ್ದ ರೈಲುಗಳ ಸಂಚಾರ ರದ್ದಾಗಿದೆ. ಅಲ್ಲದೆ ಪುರಿ ಮತ್ತು ಭುವನೇಶ್ವರ, ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಮಿನ ಗುವಾಹಟಿ ಕಡೆಗೆ ಹೊರಡುವ ರೈಲುಗಳ ಸಂಚಾರ ಸ್ಥಗಿತವಾಗಿದೆ. ಪ್ರಮುಖವಾಗಿ ಯಶವಂತಪುರ – ಹೌರಾ ಮಾರ್ಗದ 12246, 2888, 12864 ರೈಲು, ಸಂಗೊಳ್ಳಿ ರಾಯಣ್ಣ ನಿಲ್ದಾಣ – ಭುವನೇಶ್ವರ ಮಾರ್ಗದ 18464 ರೈಲು, ಗೋವಾ – ಹೌರಾ ಮಾರ್ಗದ 18048 ಹಾಗೂ ಹೌರ – ಭುವನೇಶ್ವರ – ಬೆಂಗಳೂರು – ಮೈಸೂರು – ಗೋವಾ ಮಾರ್ಗದ ರೈಲು ಸಂಚಾರ ರದ್ದಾಗಿದೆ.

ಫನಿ ಚಂಡಮಾರುತದಿಂದ ಉಂಟಾಗಬಹುದಾದ ಪರಿಣಾಮಗಳನ್ನು ನೋಡಿಕೊಂಡು ಮತ್ತೆ ಸಂಚಾರ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಫನಿ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಹಾನಿ ಸಂಭವಿಸಿದರೆ ಸಂಚಾರ ಆರಂಭವಾಗುವುದು ಮತ್ತಷ್ಟು ವಿಳಂಬ ಆಗಲಿದೆ.

ಸದ್ಯದ ಮಾಹಿತಿಯ ಅನ್ವಯ ತಾತ್ಕಾಲಿಕವಾಗಿ ಮೇ 06ರ ವರೆಗೂ ರಾಜ್ಯದಿಂದ ಹೊರಡುವ ರೈಲುಗಳ ಸಂಚಾರ ರದ್ದಾಗಿದ್ದು, ಈ ಅವಧಿಯವರೆಗೂ ಒಡಿಸ್ಸಾ ಮಾರ್ಗವಾಗಿ ರೈಲು ಸಂಚಾರ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಲಭಿಸಿದೆ.

Comments

Leave a Reply

Your email address will not be published. Required fields are marked *