ಲೋಟಸ್ vs ಲೂಟ್ ಅಸ್ ನಡುವಿನ ಚುನಾವಣೆ – ಉಡುಪಿಯಲ್ಲಿ ಸಿಟಿರವಿ ಟಾಂಗ್

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಬಿಜೆಪಿ ಶಾಸಕ ಸಿಟಿ ರವಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಕುಂಕುಮ ಹಾಕುವವರನ್ನು ಕಂಡರೆ ಭಯವಾಗುತ್ತೆ ಅಂತಾರೆ. ಅವರ ಮನೆಯವರೂ ಕುಂಕುಮ ಅಳಿಸೇ ಓಡಾಡ್ತಾರೆ ಅಂದ್ಕೊಂಡೆ ಎಂದು ನಾಲಗೆ ಹರಿಯಬಿಟ್ಟ ಸಿಟಿ ರವಿ ಅವರು, ರಾಹುಲ್ ಗಾಂಧಿ ಮಾರಮ್ಮನ ಹರಕೆಯ ಕುರಿ ತರ ಕುಂಕುಮ ಹಾಕಿಕೊಂಡಿದ್ದರು. ಕಾಂಗ್ರೆಸ್ ಹರಕೆಯ ಕುರಿಯಾಗಲಿ ರಾಹುಲ್ ಆಗೋದು ಬೇಡ ಎಂದು ಹೇಳಿದರು.

ಎಚ್‍ಡಿಡಿಗೆ ತಿರುಗೇಟು: ದೇವೇಗೌಡರು ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದಿದ್ದರು. ಅಪ್ಪನಾಣೆ ಮೋದಿ ಪ್ರಧಾನಿಯಾಗಲ್ಲ ಅಂತ ಓಡಾಡಿದರು. ಆದರೆ ಮೋದಿ 5 ವರ್ಷ ಪ್ರಧಾನಿಯಾದರು. ಈಗ ರೇವಣ್ಣ ಅಪ್ಪನಾಣೆ ಹಾಕುತ್ತಾರೆ. ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ. ನಿಂಬೆ ಹಣ್ಣು ಹೊಳೆನರಸೀಪುರಕ್ಕೆ ಮಾತ್ರ ಸಿಮೀತ ಎಂದರು.

ಕರಾವಳಿ ಜನಕ್ಕೆ ತಿಳುವಳಿಕೆ, ಬುದ್ಧಿ ಇಲ್ಲವೆಂದು ಸಿಎಂ ಕುಮಾರಸ್ವಾಮಿ ಹೇಳುತ್ತಾರೆ. ಆದರೆ ನಿಮ್ಮ ತರದ ತಿಳುವಳಿಕೆ ನಮಗೆ ಏಳು ಜನ್ಮಕ್ಕೂ ಬರುವುದು ಬೇಡ. ಮೋಸ ಮಾಡುವುದು ನಿಮ್ಮ ಜಾಯಿಮಾನ. ನಿಮ್ಮ ತಿಳುವಳಿಕೆ ಬುದ್ಧಿ ನೋಡಿ ಜನ ಬದಲಾಗುತ್ತಾರೆ. ಕುಟುಂಬದ ರಾಜಕಾರಣ ಸೋಲಿಸುತ್ತಾರೆ ಎಂದು ಭವಿಷ್ಯ ನುಡಿದರು.

ಈ ಬಾರಿಯ ಚುನಾವಣೆ ಚೌಕಿದಾರ ಮತ್ತು ಚೋರರ ನಡುವಿನ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ಮತ್ತು ಕುಟುಂಬದ ನಡುವಿನ ಚುನಾವಣೆ ಇದಾಗಿದ್ದು, ಪ್ರಧಾನಿ ಮೋದಿಗೆ 130 ಕೋಟಿ ಜನವೇ ಕುಟುಂಬ. ಕರ್ನಾಟಕದ ಅಪ್ಪ, ಮಕ್ಕಳ ಕುಟುಂಬ ಉಡುಪಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರನ್ನು ಹರಕೆಯ ಕುರಿ ಮಾಡಿದ್ದಾರೆ. ಪ್ರಮೋದ್ ಮದ್ವರಾಜ್ ಗೆ ತಾಯತ ಕಟ್ಟಿಸಿ. ಜೆಡಿಎಸ್ ಅವರು ಯಾರನ್ನು ಬದುಕಲು ಬಿಟ್ಟಿಲ್ಲ. ಪ್ರಮೋದ್ ಅವರಿಗೆ ತಾಯತ ಕಟ್ಟಿಸಲು ಅವರ ತಾಯಿಗೆ ಮನವಿ ಮಾಡುತ್ತೇನೆ ಎಂದರು.

ಮೋದಿ ಮನೆ ಹಾಳಾಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಮೋದಿಗೆ ದೇಶವೇ ಮನೆ. ದೇಶ ಹಾಳಾಗಲಿ ಎಂದು ಅವರು ಹೇಳಿದ್ದಾರೆ. ಲೋಟಸ್ vs ಲೂಟ್ ಅಸ್ ನಡುವಿನ ಚುನಾವಣೆ ಇದು ಸಿಟಿ ರವಿ ಹೇಳಿದರು.

Comments

Leave a Reply

Your email address will not be published. Required fields are marked *