ಕೃಷ್ಣಾ ನದಿ ಪಾತ್ರದ ಗ್ರಾಮಗಳ ನೆಮ್ಮದಿ ಕಸಿದ ನೀರುನಾಯಿ, ಮೊಸಳೆಗಳು

ರಾಯಚೂರು: ಪ್ರವಾಹದ ವೇಳೆ ಜಲಚರಗಳ ಕಾಟದಿಂದ ತತ್ತರಿಸಿದ್ದ ರಾಯಚೂರಿನ ಕೃಷ್ಣಾ ನದಿ ತಟದ ಗ್ರಾಮಗಳ ಜನ ಮತ್ತೆ ಜಲಚರಗಳಿಗೆ ಹೆದರಿದ್ದಾರೆ.

ನದಿ ಪಾತ್ರದ ಗ್ರಾಮಗಳ ಜನರನ್ನ ನೀರು ನಾಯಿ ಹಾಗೂ ಮೊಸಳೆ ಕಾಟ ವಿಪರೀತವಾಗಿದೆ. ನೀರು ನಾಯಿಯನ್ನ ಗ್ರಾಮೀಣ ಭಾಗದಲ್ಲಿ ಚೂರ್ ನಾಯಿ ಅಂತಲೂ ಕರೆಯುತ್ತಾರೆ. ರಾಯಚೂರು ತಾಲೂಕಿನ ಕಾಡ್ಲೂರು ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಈ ನೀರು ನಾಯಿ ಹಾಗೂ ಮೊಸಳೆ ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ನೀರು ನಾಯಿಗಳು ಜನರಿದ್ದ ಕಡೆ ಸುಳಿಯುವುದಿಲ್ಲ. ಜನರಿಗೆ ತಾವಾಗಿಯೇ ತೊಂದರೆ ಕೊಡುವುದಿಲ್ಲ. ಆದರೂ ನೀರು ನಾಯಿಗಳು ಹೆಚ್ಚು ಸಂಖ್ಯೆಯಲ್ಲಿ ಓಡಾಡುತ್ತಿರುವುದನ್ನ ನೋಡಿ ಜನ ಹೆದರಿಕೊಳ್ಳುತ್ತಿದ್ದಾರೆ.

ಕೃಷ್ಣಾ ನದಿಯ ಎಲ್ಲೆಡೆ ತುಂಬಾ ಸಂಖ್ಯೆಯಲ್ಲಿ ಮೊಸಳೆಗಳಿದ್ದು, ಬೃಹತ್ ಗಾತ್ರದ ಮೊಸಳೆಗಳು ಕಲ್ಲು ಬಂಡೆಗಳ ಮೇಲೆ ಪ್ರತ್ಯಕ್ಷವಾಗುತ್ತಲೇ ಇರುತ್ತವೆ. ನದಿ ದಂಡೆಯಲ್ಲಿ ಪಂಪ್ ಸೆಟ್‍ಗಳನ್ನ ಹಾಕಿಕೊಂಡಿರುವ ರೈತರಂತೂ ನೀರು ನಾಯಿ, ಮೊಸಳೆ ಕಾಟಕ್ಕೆ ಸಂಜೆ ವೇಳೆ ನದಿಯ ಹತ್ತಿರಕ್ಕೆ ಹೋಗುತ್ತಿಲ್ಲ. ಅಲ್ಲದೆ ಆಹಾರವನ್ನರಸಿ ಗ್ರಾಮಗಳತ್ತ ಈ ಪ್ರಾಣಿಗಳು ಸುಳಿಯುವ ಭೀತಿ ವಿಪರೀತವಾಗಿದೆ. ಹೀಗಾಗಿ ನದಿಪಕ್ಕದ ಗ್ರಾಮದ ಜನ ನಿತ್ಯ ಆತಂಕದಲ್ಲಿ ಬದುಕುತ್ತಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹಾಗೂ ಹರಿವು ಹೆಚ್ಚಾಗಿದ್ದರಿಂದ ಜಲಚರಗಳು ಗ್ರಾಮಗಳತ್ತ ನುಗ್ಗಿದ್ದವು. ಈಗಲೂ ಅದೇ ಪರಸ್ಥಿತಿ ಮುಂದುವರೆದಿದೆ ಎಂದು ಗ್ರಾಮಸ್ಥ ವಿರೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳನ್ನ ಸಹ ನದಿ ದಂಡೆಗೆ ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಆಕಸ್ಮಿಕವಾಗಿ ನದಿಗೆ ಇಳಿಯುವವರಿಗೆ ಅಪಾಯದ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *