ಜೈಲು ಕೈದಿಗಳಿಗೂ ಐಷಾರಾಮಿ ಸೌಲಭ್ಯ- ಎಸ್‍ಪಿಯಿಂದ ಕೂಲರ್, ಮೊಬೈಲ್, ಎಲ್‍ಇಡಿ ಟಿವಿ ಜಪ್ತಿ

ಬಳ್ಳಾರಿ: ತಪ್ಪು ಮಾಡಿ ಶಿಕ್ಷೆ ಅನುಭವಿಸಿ ಕೈದಿಗಳ ಮನ ಪರಿವರ್ತನೆ ಮಾಡುವ ಕೇಂದ್ರವಾಗಬೇಕಾದ ಜೈಲುಗಳು ಇಂದು ಐಷಾರಾಮಿ ಸ್ಥಳಗಳಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯ ನೀಡುತ್ತಿರುವ ಘಟನೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಜೈಲುಗಳು ಅಂದ್ರೆ ಕೈದಿಗಳ ಮನ ಪರಿವರ್ತನಾ ಕೇಂದ್ರ ಅಂತಾರೆ. ಆದ್ರೆ ಇತ್ತೀಚಿಗೆ ಜೈಲುಗಳು ಸಹ ಐಷಾರಾಮಿ ಜೀವನದ ಒಂದು ಭಾಗ ಎನ್ನುವಂತಾಗಿ ಬಿಟ್ಟಿದೆ. ಇದಕ್ಕೆ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದೆ.

ಇಲ್ಲಿ ಶಿಕ್ಷೆ ಅನುಭವಿಸಬೇಕಾದ ಕೈದಿಗಳ ಸೆಲ್ ನಲ್ಲಿ ಕೂಲರ್, ಎಲ್ ಇ ಡಿ ಟಿವಿ, ಮೊಬೈಲ್, ಗಾಂಜಾ, ಬಿಡಿ ಸಿಗರೇಟ್ ಸೇರಿದಂತೆ ಎಲ್ಲ ವಸ್ತುಗಳು ದೊರೆತಿವೆ. ಬಳ್ಳಾರಿಯ ನೂತನ ಎಸ್ ಪಿ ಅರುಣ ರಂಗರಾಜನ್ ದಿಢೀರ್ ದಾಳಿ ಮಾಡಿದ ವೇಳೆ ಕೈದಿಗಳ ಬಳಿಯಿದ್ದ 14 ಮೊಬೈಲ್, 3 ಎಲ್ ಇ ಡಿ ಟಿವಿ ಸೆಟ್ ಅಪ್ ಬಾಕ್ಸ್, 3 ಕೂಲರ್, ಬೀಡಿ, ಸಿಗರೇಟ್, ಗಾಂಜು ಪೊಟ್ಟಣಗಳನ್ನು ಜಪ್ತಿ ಮಾಡಿದ್ದಾರೆ.

ಜೈಲಿನ ಮೇಲೆ ದಾಳಿ ಮಾಡಿದ ಎಸ್‍ಪಿ ಅರುಣ್ ರಂಗರಾಜನ್ ಸಂಜೆ ವೇಳೆಗೆ ಡಿವೈಎಸ್ಪಿಗಳು, ಡಿಎಆರ್ ಆರ್ಪಿಐ, ಸಿಪಿಐಗಳು ಸೇರಿದಂತೆ 50ಕ್ಕೂ ಪೊಲೀಸರಿಂದ ಎಲ್ಲ ಕೈದಿಗಳ ಸೆಲ್ ಗಳನ್ನು ಪರಿಶೀಲನೆ ಮಾಡಿ ಐಷಾರಾಮಿ ಜೀವನಕ್ಕಾಗಿ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಅಕ್ರಮವಾಗಿ ಜೈಲಿನೊಳಗೆ ವಸ್ತುಗಳನ್ನು ತಂದ ಕೈದಿಗಳ ವಿರುದ್ಧ ದೂರು ದಾಖಲು ಮಾಡಲು ಆದೇಶ ನೀಡಿದ್ದಾರೆ.

Comments

Leave a Reply

Your email address will not be published. Required fields are marked *