ಶಕ್ತಿಪೀಠ ಮಾರಿಕಾಂಬ ಗರ್ಭಗುಡಿಯಲ್ಲಿ ಬಿರುಕು- ಆತಂಕದಲ್ಲಿ ಭಕ್ತರು

ಕಾರವಾರ: ದಕ್ಷಿಣ ಭಾರತದ ಶಕ್ತಿಪೀಠ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ  ಗರ್ಭಗುಡಿಯ ಗೋಪುರವು ಬಿರುಕು ಬಿಟ್ಟಿದ್ದು  ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಶಿರಸಿ ಶ್ರೀ ಮಾರಿಕಾಂಬ. ರಾಜ್ಯದಲ್ಲಿ ಐತಿಹಾಸಿಕ ಮಹತ್ವದ ಜೊತೆಗೆ 300 ವರ್ಷಗಳಿಗೂ ಹಳೆಯದಾದ ಶಕ್ತಿ ಪೀಠಗಳಲ್ಲೊಂದು. ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯದಲ್ಲಿಯೇ ಅತಿದೊಡ್ಡ ಜಾತ್ರೆ ನಡೆಯುವ ಮೂಲಕ ಪ್ರಸಿದ್ಧಿ ಪಡೆದಿರುವ ಶಕ್ತಿಪೀಠಕ್ಕೆ ಕರ್ನಾಟಕದಲ್ಲಿ ಮಾತ್ರ ಅಲ್ಲ ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಆದರೆ ಇಂತಹ ದೇವರ ಉತ್ಸವ ಮೂರ್ತಿಯಲ್ಲೀಗ ಬಿರುಕು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ, ಗರ್ಭಗುಡಿಯ ಗೋಪುರದ ಒಳಭಾಗದಲ್ಲೂ ಬಿರುಕು ಕಾಣಿಸಿಕೊಂಡಿದ್ದು ಇದರಿಂದ ನಾಡಿಗೆ ಕೇಡಾಗಲಿದೆ ಎಂದು ಭಕ್ತ ಮನೋಜ್ ಭಟ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ 4ಕ್ಕೂ ಹೆಚ್ಚು ಬಾರಿ ದೇವರ ಗರ್ಭಗುಡಿ ಗೋಪುರ ಬಿರುಕು ಬಿಟ್ಟಿದ್ದು ಇವುಗಳನ್ನು ಬಣ್ಣ ಬಳಿದು ಮುಚ್ಚಲಾಗಿತ್ತು. ನಂತರ ಈಗ ಉತ್ಸವ ಮೂರ್ತಿ ಕೂಡ ಬಿರುಕು ಬಿಟ್ಟಿದ್ದು, ಆಡಳಿತ ಮಂಡಳಿ ಮಾತ್ರ ಮೌನವಾಗಿದೆ. ಧಾರ್ಮಿಕ ಮುಖಂಡರು ಕೂಡ ಈ ಕುರಿತು ಅಸಮಾಧಾನ ತೋಡಿಕೊಂಡಿದ್ದು, ದೇವರ ಉತ್ಸವ ಮೂರ್ತಿಯನ್ನು ಬದಲಾಯಿಸಬೇಕು. ಹೊಸ ವಿಗ್ರಹಕ್ಕೆ ಜೀವಕಳೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅತಿಯಾಗಿದ್ದು ಕಾಳಿ ನದಿಯಂತಹ ನೀರಿನ ಸೆಲೆಗಳು ಬತ್ತಿ ಹೋಗಿದೆ. ಮಂಗನ ಕಾಯಿಲೆಯಂತಹ ರೋಗ ರುಜಿನಗಳು ಕಾಣಿಸಿಕೊಳ್ತಿದ್ದು ಇದಕ್ಕೆಲ್ಲ ಮಾರಿಯ ಮುನಿಸೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *