ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ

– ಸಿಗಲಿದೆ 5 ಸಾವಿರ ರೂ. ಬಹುಮಾನ
– ಮಾಹಿತಿ ನೀಡಿದವರ ಹೆಸರ ಗೌಪ್ಯ

ಲಕ್ನೋ: ತಬ್ಲಿಘಿ ಜಮಾತ್‍ಗೆ ತೆರಳಿ ಇನ್ನೂ ಪತ್ತೆಯಾಗದವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸರು ಪ್ರಕಟಿಸಿದ್ದಾರೆ.

ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಬೇಕೆಂದು ಎಲ್ಲ ಸರ್ಕಾರಗಳು ಸೂಚನೆ ನೀಡುತ್ತಿವೆ. ಆದರೂ ಈ ಕಾರ್ಯಕ್ರಮಕ್ಕೆ ತೆರಳಿದ ಹಲವು ಮಂದಿ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಜಂಗಢದ ಪೊಲೀಸರು ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಬಹಳ ಸಂಖ್ಯೆಯಲ್ಲಿ ಜಮಾತ್ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ. ಹೀಗಾಗಿ ಈಗಲೂ ನಾವು ಸಂಬಂಧಪಟ್ಟವರ ಮುಂದೆ ಹಾಜರಾಗಿ ಎಂದು ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಬೇರೆ ವ್ಯಕ್ತಿಗಳಿಂದ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಜಂಗಢದ ಎಸ್‍ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

ತಬ್ಲಿಘಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲದೆ ಮಾಹಿತಿ ತಿಳಿಸಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ. ಅಜಂಗಢದಲ್ಲಿ 4 ಪಾಸಿಟಿವ್ ಪ್ರಕರಣ ಬಂದಿದ್ದು ಎಲ್ಲ ತಬ್ಲಿಘಿ ಕಾರ್ಯಕ್ರಮಕ್ಕೆ ತೆರಳಿದವರೇ ಆಗಿದ್ದಾರೆ.

ಶನಿವಾರದವರೆಗೆ ಒಟ್ಟು ಉತ್ತರ ಪ್ರದೇಶದಲ್ಲಿ 448 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ 254 ಮಂದಿಗೆ ಪಾಸಿಟಿವ್ ಬಂದಿದೆ. ಇದನ್ನೂ ಓದಿ: 21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

ಕೊರೊನಾ ವಿರುದ್ಧ ಸಮರ ಸಾರಿರುವ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಪ್ರಕರಣವೇ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ತಬ್ಲಿಘಿಗಳಿಂದಲೇ ಎಲ್ಲ ಕಡೆ ವ್ಯಾಪಿಸಿದೆ. ಜಮಾತ್‍ಗೆ ಹೋಗಿ ಬಂದವರ ಪೈಕಿ ಹಲವು ಮಂದಿಯ ಸುಳಿವೇ ಸಿಕ್ಕಿಲ್ಲ. ಇವತ್ತು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ತಬ್ಲಿಘಿ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ತಬ್ಲಿಘಿ ಪ್ರಕರಣ ಇಲ್ಲದಿದ್ದರೆ, ಕೊರೊನಾ ಹಿಡಿತದಲ್ಲಿ ಇರುತ್ತಿತ್ತು ಅಂತಲೂ ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ.

ಕರ್ನಾಟಕಕ್ಕೂ ಕಂಟಕ:
ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50 ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ ಜಿಲ್ಲೆಗಳಲ್ಲಿ 472 ಮಂದಿ ಸೇರಿ ಒಟ್ಟು 801 ಮಂದಿ ಕ್ವಾರಂಟೈನ್‍ನಲ್ಲಿದ್ದು 581 ಮಂದಿ ಇನ್ನೂ ಪತ್ತೆಯಾಗಿಲ್ಲ. 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ತಮಿಳುನಾಡಿನಲ್ಲಿ ಒಟ್ಟು 969 ಮಂದಿಗೆ ಸೋಂಕು ಬಂದಿದ್ದು, 833 ಮಂದಿ ಜಮಾತ್‍ಗೆ ತೆರಳಿದ್ದರು. ದೆಹಲಿಯಲ್ಲಿ 903 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 584 ಮಂದಿ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಶುಕ್ರವಾರ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಟ್ವೀಟ್ ಮಾಡಿ, ದೇಶದ ಕೊರೊನಾ ಪ್ರಕರಣಗಳ ಪೈಕಿ ಶೇ.63 ರಷ್ಟು ಪ್ರಕರಣಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *